ಮಂಗಳೂರು: ಕುಲಶೇಖರ್–ಪಡೀಲ್ ನಿಲ್ದಾಣಗಳ ಮಧ್ಯೆ ಭೂ ಕುಸಿತದಿಂದಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದ ತಡೆಗೋಡೆ ಸೇರಿದಂತೆ ಭಾರಿ ಪ್ರಮಾಣದ ಮಣ್ಣನ್ನು ತೆಗೆಯುವ ಕಾರ್ಯ ಮುಂದುವರಿದಿದ್ದು, ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಕ್ಕೆ ತೊಂದರೆ ಉಂಟಾಗಿದೆ.
ಮಂಗಳೂರು ಜಂಕ್ಷನ್–ತೋಕೂರು ರೈಲು ನಿಲ್ದಾಣಗಳ ಮಧ್ಯೆ ಭೂಕುಸಿತ ಸಂಭವಿಸಿದ್ದು, ಇದರಿಂದ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಮುಂಬೈ ಸಿಎಸ್ಎಂಟಿ–ಮಂಗಳೂರು ಜಂಕ್ಷನ್ (ರೈ.ಸಂ.01133) ಎಕ್ಸ್ಪ್ರೆಸ್ ರೈಲು ಶನಿವಾರ ಮಂಗಳೂರು ಜಂಕ್ಷನ್ ಬದಲು, ಸುರತ್ಕಲ್ ನಿಲ್ದಾಣದವರೆಗೆ ಮಾತ್ರ ಸಂಚರಿಸಿತು. ಅಲ್ಲಿಂದ ಪ್ರಯಾಣಿಕರನ್ನು ಬಸ್ ಮೂಲಕ ಮಂಗಳೂರಿಗೆ ಕರೆತರಲಾಯಿತು.
ಮಂಗಳೂರು ಜಂಕ್ಷನ್– ಮುಂಬೈ ಸಿಎಸ್ಎಂಟಿ (ರೈ.ಸಂ. 01134) ಎಕ್ಸ್ಪ್ರೆಸ್ ರೈಲು, ಸಂಜೆ 4.43 ರ ಬದಲು, ಸಂಜೆ 5.16ಕ್ಕೆ ಸುರತ್ಕಲ್ ನಿಲ್ದಾಣದಿಂದ ಪ್ರಯಾಣ ಬೆಳೆಸಿತು. ಮಂಗಳೂರಿನ ಪ್ರಯಾಣಿಕರನ್ನು ಸುರತ್ಕಲ್ ನಿಲ್ದಾಣದವರೆಗೆ ಬಸ್ನಲ್ಲಿ ಕರೆದೊಯ್ಯಲಾಯಿತು. ಮಂಗಳೂರು ಸೆಂಟ್ರಲ್–ಮುಂಬೈ ಲೋಕಮಾನ್ಯ ತಿಲಕ (ರೈ.ಸಂ. 02620) ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಶನಿವಾರ ಮಧ್ಯಾಹ್ನ 12.40 ರ ಬದಲು ಸಂಜೆ 6 ಗಂಟೆಗೆ ಪ್ರಯಾಣ ಆರಂಭಿಸಿತು.
ಮಾರ್ಗ ಬದಲಾವಣೆ: ಕೊಯಮತ್ತೂರು–ಹಿಸಾರ್ (ರೈ.ಸಂ. 02476) ಎಕ್ಸ್ಪ್ರೆಸ್ ರೈಲು, ಕೊಚ್ಚುವೇಳಿ–ಚಂಡಿಗಡ (ರೈ.ಸಂ. 04559) ಎಕ್ಸ್ಪ್ರೆಸ್ ರೈಲು, ಎರ್ನಾಕುಲಂ–ನಿಜಾಮುದ್ದೀನ್ (ರೈ.ಸಂ.02617) ಮಂಗಳಾ ಲಕ್ಷದ್ವೀಪ್ ಎಕ್ಸ್ಪ್ರೆಸ್ ರೈಲು, ಎರ್ನಾಕುಲಂ–ಒಖಾ (ರೈ.ಸಂ.06338) ಎಕ್ಸ್ಪ್ರೆಸ್ ವಿಶೇಷ ರೈಲು, ತಿರುವನಂತಪುರ–ನಿಜಾಮುದ್ದೀನ್ (ರೈ.ಸಂ.06083) ಎಕ್ಸ್ಪ್ರೆಸ್ ರೈಲುಗಳು ಈರೋಡ್, ರೇಣಿಗುಂಟಾ ಮೂಲಕ ಸಂಚರಿಸಿದವು.
ತಿರುವನಂತಪುರ–ಮುಂಬೈ ಲೋಕಮಾನ್ಯ ತಿಲಕ (ರೈ.ಸಂ. 06346) ನೇತ್ರಾವತಿ ಎಕ್ಸ್ಪ್ರೆಸ್ ವಿಶೇಷ ರೈಲು ಮಂಗಳೂರು ಜಂಕ್ಷನ್, ಪಡೀಲ್, ಹಾಸನ, ಮಡಗಾಂ ಮೂಲಕ ಸಂಚರಿಸಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.