
ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ಭಾನುವಾರ ಭಕ್ತರ ಸಭೆ ನಡೆಯಿತು. ದೇವಸ್ಥಾನದ ಮುಂಭಾಗದ ಕಲ್ಯಾಣ ಮಂಟಪ ತೆರವು ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಂಜಿಗುಡ್ಡೆ ಈಶ್ವರ ಭಟ್, ನಮ್ಮ ಸಮಿತಿ ಬಂದ ಬಳಿಕ ಆರಂಭದಲ್ಲಿ ಎಲ್ಇಡಿ ವ್ಯವಸ್ಥೆ, ಪರಮಾನ್ನ ಪ್ರಸಾದ ವಿತರಣೆ ವ್ಯವಸ್ಥೆ, ₹ 60 ಕೋಟಿ ಮೌಲ್ಯದ ದೇವಳದ ಜಾಗ ಮರು ಸ್ವಾಧೀನ ಮಾಡಲಾಗಿದೆ. ಭಕ್ತರ ಮೂಲಕ ಅನ್ನದಾನಕ್ಕೆ ಸುಮಾರು 500 ಕ್ವಿಂಟಲ್ ಅಕ್ಕಿ ಸಂಗ್ರಹ ಆಗಿದೆ. 12 ವರ್ಷಗಳ ಬಳಿಕ ಭಕ್ತರ ಸಹಕಾರದೊಂದಿಗೆ ಬ್ರಹ್ಮಕಲಶೋತ್ಸವದ ನಡೆಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ಸಮಿತಿಗೆ 3,500 ಮಂದಿ ಸದಸ್ಯರಾಗಿದ್ದಾರೆ. 15 ಸಾವಿರ ಸದಸ್ಯರನ್ನು ಸಮಿತಿಗೆ ಸೇರಿಸುವ ಗುರಿ ಇದೆ ಎಂದರು.
ವೆಂಕಟ್ರಾಜ್ ಅವರು ದೇವಳ ಅಭಿವೃದ್ಧಿಯ ಮಾಸ್ಟರ್ಪ್ಲ್ಯಾನ್ ಕುರಿತು ವಿವರಿಸಿದರು.
ವಕೀಲ ಎನ್.ಕೆ.ಜಗನ್ನಿವಾಸ್ ರಾವ್ ಮಾತನಾಡಿ, ಅಭಿವೃದ್ಧಿ ಹೇಗೆ ಮಾಡಬೇಕು ಎಂಬುದು ಮುಖ್ಯವಾಗುತ್ತದೆ. ಕಲ್ಯಾಣ ಮಂಟಪ ನಿರ್ಮಾಣದ ವೇಳೆ ತಜ್ಞರ ಸಹಿತ ಎಲ್ಲ ವಿಚಾರಗಳನ್ನು ತಿಳಿದುಕೊಂಡೇ ಮಾಡಲಾಗಿದೆ. ಅದು ದೇವಳ ಪರಿಧಿಯಿಂದ ಹೊರಭಾಗದಲ್ಲಿದೆ. ದೇವರಿಗೆ ಯಾವುದೂ ಅಡ್ಡಿ ಇಲ್ಲ. ಈ ಕಟ್ಟಡಕ್ಕೆ ₹ 3 ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ. ಹಿಂದಿನ ಅಷ್ಟಮಂಗಲ ಪ್ರಶ್ನಾ ಚಿಂತನೆಗಳಲ್ಲಿ ಮಂಟಪ ದೇವರಿಗೆ ಅಡ್ಡ ಬರುತ್ತದೆ ಎಂದು ವಿಚಾರ ಬಂದಿಲ್ಲ, ಕೆಲವೊಂದು ವಾಸ್ತು ಬದಲಾವಣೆ ಮಾಡಲು ಸಲಹೆ ಬಂದಿದೆ. ಈ ಕಾರಣದಿಂದ ಕಲ್ಯಾಣ ಮಂಟಪ ತೆಗೆಯುವ ಉದ್ದೇಶವನ್ನು ಕೈಬಿಡಬೇಕು ಎಂದು ಸಲಹೆ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ಕುಮಾರ್ ರೈ ಮಾತನಾಡಿ, ದೇವಳದ ಮುಂಭಾಗದ ಗದ್ದೆ ಭಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣದ ಯೋಜನೆ ಇಲ್ಲ. ಅಯ್ಯಪ್ಪ ಮತ್ತು ನಾಗನ ಗುಡಿ ಹಾಗೂ ಸಭಾಂಗಣವನ್ನು ತೆಗೆಯುವಂತೆ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಹಿಂದಿನವರು ಮಾಡಿದ್ದರಲ್ಲಿ ತಪ್ಪು ಹುಡುಕುವ ಕೆಲಸವನ್ನು ನಾವು ಮಾಡುವುದಿಲ್ಲ. ನಮಗೆ ಕಲ್ಯಾಣ ಮಂಟಪವನ್ನು ತೆಗೆಯುವ ಹಠವೂ ಇಲ್ಲ. ಇನ್ನೊಮ್ಮೆ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಹಿಂದೆ ದೇವರು ನೆಲಸ್ಪರ್ಶ ಆಗಿ ದೇವರ ಸೂಚನೆಯಂತೆ ಅಷ್ಟಮಂಗಳ ಪ್ರಶ್ನೆ ಇರಿಸಲಾಗಿತ್ತು. ಯಾರಾದರೂ ಒಬ್ಬ ಜ್ಯೋತಿಷಿಯನ್ನು ಶಾಶ್ವತವಾಗಿ ನೇಮಿಸಬೇಕು. ಆಗ ಪ್ರತ್ಯೇಕ ಅಭಿಪ್ರಾಯಗಳು ಬರುವುದು ತಪ್ಪುತ್ತದೆ. ಜನರ ಭಾವನೆಗಳನ್ನು ಗೌರವಿಸಬೇಕು. ಕಲ್ಯಾಣ ಮಂಟಪ ಕಟ್ಟಡದ ಮೇಲಿನ ಗೋಡೆಯನ್ನು ತೆಗೆದು ಗ್ಯಾಲರಿ ರೂಪದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಯೋಚಿಸಬಹುದು ಎಂದರು.
ಮಹಾಲಿಂಗೇಶ್ವರ ದೇವಳ ಸಂರಕ್ಷಣಾ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ ಮಾತನಾಡಿ, ಈಗ ಮಾಡಿರುವ ಮಾಸ್ಟರ್ ಪ್ಲ್ಯಾನನ್ನು ನಿಮ್ಮ ಅವಧಿಯಲ್ಲೇ ಮುಗಿಸುತ್ತೇವೆ ಎಂದು ಜನರಿಗೆ ವಾಗ್ದಾನ ಮಾಡಬೇಕು ಎಂದು ಆಗ್ರಹಿಸಿದರು.
2 ವರ್ಷದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಕಲ್ಪನೆಗೆ ಬದ್ಧರಾಗಿದ್ದೇವೆ ಎಂದು ಅಶೋಕ್ಕುಮಾರ್ ರೈ ಭರವಸೆ ನೀಡಿದರು.
ದೇವಳ ಪ್ರವೇಶದ ಜಾಗ ಕಿರಿದಾಗಿದ್ದು, ಟೆಲಿಕಾಂ ಇಲಾಖೆಯೊಂದಿಗೆ ಮಾತನಾಡಿ ವಿಸ್ತರಣೆ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು ಎಂದು ಸುದರ್ಶನ್ ಮುರ, ದೇವಳ ಜಾಗಕ್ಕೆ ಸುತ್ತು ತಡೆಬೇಲಿ ನಿರ್ಮಿಸಬೇಕು. ದೇವಳ ಹೆಸರಿಗೆ ಜಾಗ ಆಗಲು ಶ್ರಮಿಸಿದ ದಿ.ಕೋಚಣ್ಣ ರೈ ಹೆಸರನ್ನು ಉಲ್ಲೇಖಿಸಬೇಕು. ಅಯ್ಯಪ್ಪ ಮಾಲಾಧಾರಿಗಳು ಉಳಿದುಕೊಳ್ಳಲು, ಸ್ನಾನ ಮಾಡಲು, ಸ್ವಾಮೀಜಿಗಳು ಬರುವ ವೇಳೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಬಾಲಚಂದ್ರ ಸೊರಕೆ ಆಗ್ರಹಿಸಿದರು.
ಕೃಷ್ಣಪ್ರಸಾದ್ ಆಳ್ವ, ಪ್ರೊ.ಎ.ವಿ.ನಾರಾಯಣ ಮಾತನಾಡಿದರು.
ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ್ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ವಸಂತ ಕದಿಲಾಯ, ದಿನೇಶ್ ಪಿ.ವಿ., ನಳಿನಿ ಶೆಟ್ಟಿ, ಕೃಷ್ಣವೇಣಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಜೀರ್ಣೋದ್ಧಾರ ಸಮಿತಿಯ ಪ್ರಸಾದ್ ಕೌಶಲ್ ಶೆಟ್ಟಿ, ಶಿವಪ್ರಸಾದ್, ರಾಜರಾಮ ಶೆಟ್ಟಿ ಕೋಲ್ಪೆ, ಅಮರನಾಥ ಗೌಡ, ರಾಮದಾಸ ಗೌಡ, ಶಿವರಾಮ ಆಳ್ವ ಭಾಗವಹಿಸಿದ್ದರು. ವರುಣ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.