ADVERTISEMENT

ಮಂಗಳೂರು | ಚಿಕಿತ್ಸೆಗೆ ಆಯುರ್ವೇದ ಮೊದಲ ಆಯ್ಕೆ ಆಗಲಿ: ಯು.ಟಿ.ಖಾದರ್ ಆಶಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:08 IST
Last Updated 2 ಫೆಬ್ರುವರಿ 2026, 2:08 IST
ಯು.ಟಿ.ಖಾದರ್ 
ಯು.ಟಿ.ಖಾದರ್    

ಮಂಗಳೂರು: ‘ಬೇರೆ ಔಷಧ ಪದ್ಧತಿಗಳನ್ನು ಪ್ರಯತ್ನಿಸುವ ಜನ ಅಂತಿಮವಾಗಿ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ. ಚಿಕಿತ್ಸೆಗೆ ಆಯುರ್ವೇದವೇ ಮೊದಲ ಆಯ್ಕೆ ಆಗಬೇಕು. ಋಷಿ ಮುನಿಗಳಿಂದ ಬಂದ ಪಾರಂಪರಿಕ ವೈದ್ಯಕೀಯ ಜ್ಞಾನವನ್ನು ಜನರಿಗೆ ಹಂಚುವ ಕೆಲಸ ದೊಡ್ಡ ಮಟ್ಟದಲ್ಲಿ ಆಗಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಆಯುಷ್ ಹಬ್ಬ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಆಯುಷ್ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿ ಆಯೋಜಿಸಿರುವ ಎರಡು ದಿನಗಳ ಆಯುಷ್ ಹಬ್ಬದಲ್ಲಿ ‘ಆಯುಷ್ ಅಭಿನಂದನೆ’ ನೆರವೇರಿಸಿ ಅವರು ಭಾನುವಾರ ಮಾತನಾಡಿದರು. 

‘ಕೆಲವು ಆಯುರ್ವೇದ ವೈದ್ಯರೂ ಅಲೋ‍ಪಥಿ ಔಷಧ ನೀಡುತ್ತಾರೆ. ಅವರೇ ಹೀಗೆ ಮಾಡಿದರೆ ಈ ವೈದ್ಯ ಪದ್ಧತಿಯನ್ನು ಮುಂದುವರಿಸುವುದು ಯಾರು. ಆಯುರ್ವೇದ ಜ್ಞಾನವನ್ನು ಸಮರ್ಪಕವಾಗಿ ಬಳಸಿದ್ದೇ ಆದರೆ ಖಂಡಿತ ಜನ ಆಯುರ್ವೇದ ವೈದ್ಯರ ಬಳಿಗೇ ಮುಗಿಬೀಳುತ್ತಾರೆ’ ಎಂದರು. 

ADVERTISEMENT

ಆಯುಷ್ ಹಬ್ಬದ ಅಂಗವಾಗಿ ನೀಡುವ ‘ಆಯುಷ್ ರತ್ನ’ ಪುರಸ್ಕಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಯ್ಕೆಯಾಗಿದ್ದು, ಅವರ ಬದಲು ಅವರ ಪುತ್ರಿ, ಬೆಂಗಳೂರಿನ ಕ್ಷೇಮ ವನದ ನಿರ್ದೇಶಕಿ ಶ್ರದ್ಧಾ ಅಮಿತ್ ಪುರಸ್ಕಾರವನ್ನು ಸ್ವೀಕರಿಸಿದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ ‘ಆಯುಷ್ ವಿಭೂಷಣ’ ಪುರಸ್ಕಾರ ಪ್ರದಾನ ಮಾಡಲಾಯಿತು.

ಸಾಧಕರಾದ ಡಾ.ಪ್ರಸನ್ನ ನರಸಿಂಹ ರಾವ್, ಡಾ. ಗಿರಿಧರ್ ಕಜೆ, ಡಾ. ಪ್ರಶಾಂತ್ ಶೆಟ್ಟಿ, ಡಾ. ಅಬ್ರಹಾಂ ಝಕಾರಿಯಾ ಹಾಗೂ ಡಾ.ಯು.ಟಿ. ಇಫ್ತಿಕಾರ್ ಫರೀದ್ ಅವರಿಗೆ ಆಯುಷ್ ಭೂಷಣ ಪುರಸ್ಕಾರ, ಬೆಳ್ತಂಗಡಿಯ ಡಾ. ಗೋಪಾಲಕೃಷ್ಣ ಕೆ., ಬಂಟ್ವಾಳದ ಡಾ.ಜಡ್ಡು ಗಣಪತಿ ಭಟ್‌, ಪುತ್ತೂರಿನ ಡಾ.ಶ್ರೀಕೃಷ್ಣ ಶಾಸ್ತ್ರಿ, ಸುಳ್ಯದ ಡಾ.ಡಿ.ವಿ. ಲೀಲಾಧರ್‌, ಡಾ. ಹರಿಪ್ರಸಾದ್‌ ತುಡಿಯಡ್ಕ, ಮಂಗಳೂರಿನ ಡಾ.ಪ್ರವೀಣ್ ರಾಜ್‌, ಡಾ.ಶಶಿಕಾಂತ್ ತಿವಾರಿ, ಉಡುಪಿಯ ಡಾ.ನಾಗರಾಜ ಪೂಜಾರಿ, ಡಾ.ಶಶಿಕಿರಣ್ ಶೆಟ್ಟಿ, ಡಾ.ಅಮೀನಾ ಮೀರ್‌,ಡಾ.ಮಹಮ್ಮದ್ ರಫೀಕ್‌, ಮೂಡುಬಿದಿರೆಯ ಡಾ.ವನಿತಾ ಶೆಟ್ಟಿ, ಪುತ್ತೂರಿನ ಡಾ.ಹರಿಕೃಷ್ಣ ಪಾಣಾಜೆ, ಮಂದಿಗೆ ‘ಆಯುಷ್ ಶ್ರೀ’ ಪುರಸ್ಕಾರ, ಉಪ್ಪಿನಂಗಡಿಯ ಡಾ.ಸುಪ್ರೀತ್ ಲೋಬೊ, ಕುಂದಾಪುರದ ಡಾ.ರಾಜೇಶ್ ಬಾಯರಿ, ಮಂಗಳೂರಿನ ಡಾ.ಆಯಿಷಾ ಸುಹಾ, ಡಾ.ಪ್ರವೀಣ್ ರೈ ಹಾಗೂ ಡಾ.ನಂದೀಶ್‌ ಅವರಿಗೆ ‘ಆಯುಷ್ ಯುವಶ್ರೀ’ ಪುರಸ್ಕಾರ ಪ್ರದಾನ ಮಾಡಲಾಯಿತು.   

ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮಹಮ್ಮದ್‌ ಇಕ್ಬಾಲ್, ಆಯೋಜನೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಖಲೆ, ಕಣಚೂರು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಣಚೂರು ಮೋನು ಭಾಗವಹಿಸಿದ್ದರು.


ಆಯೋಜನಾ ಸಮಿತಿ ಅಧ್ಯಕ್ಷ ಡಾ.ಕೇಶವ ಪಿ.ಕೆ. ಸ್ವಾಗತಿಸಿದರು. ಗೌರವಾಧ್ಯಕ್ಷೆ ಡಾ.ಆಶಾಜ್ಯೋತಿ ರೈ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.