ಮಂಗಳೂರು ಬಲ್ಮಠದ ಸಹೋದಯ ಸಭಾಂಗಣದ ಆವರಣದಲ್ಲಿ ಬಿದ್ದ ಮರವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತೆರವು ಮಾಡಿದರು
ಮಂಗಳೂರು: ನಗರ ಮಧ್ಯದ ಬಲ್ಮಠದಲ್ಲಿರುವ ಸಹೋದಯ ಸಭಾಂಗದ ಆವರಣದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ವಾಹನಗಳು ಜಖಂಗೊಂಡಿವೆ.
ನಗರದಲ್ಲಿ ಒಂದೆರಡು ದಿನಗಳಿಂದ ಭಾರಿ ರಭಸವಾಗಿ ಕರೆಗಾಳಿ ಬೀಸುತ್ತಿದ್ದು ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಉಪ್ಪಳಿಗೆ ಮರ ಬುಡಸಮೇತ ಉರುಳಿದೆ. ಮರದ ಒಂದು ಭಾಗ ಶಾಂತಿ ಚರ್ಚ್ ಕಡೆಗೆ ಸಾಗುವ ರಸ್ತೆಯ ಮೇಲೆಯೂ ಬಿದ್ದಿದೆ. ಆವರಣದ ಒಳಗೆ ನಿಲ್ಲಿಸಿದ್ದ ಕಾರು, ಆಟೊ ಸೇರಿದಂತೆ 7 ವಾಹನಗಳಿಗೆ ಹಾನಿಯಾಗಿದೆ.
ಕಾರೊಂದರಲ್ಲಿದ್ದ ಕುಟುಂಬ ಅಪಾಯದಿಂದ ಪಾರಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಹೊರಗೆ ವಿದ್ಯುತ್ ತಂತಿಯ ಮೇಲೆ ರೆಂಬೆಗಳು ಬಿದ್ದ ಕಾರಣ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿತು.
ಅಗ್ನಿಶಾಮಕ ದಳ ಪಾಂಡೇಶ್ವರ ಘಟಕದ ಆರು ಸಿಬ್ಬಂದಿ, ಮರವನ್ನು ತೆರವು ಮಾಡಿದರು. ಮಧ್ಯಾಹ್ನದೊಳಗೆ ತೆರವು ಕಾರ್ಯ ಮುಗಿದಿದೆ ಎಂದು ಸಹಾಯಕ ಅಗ್ನಿಶಾಮಕ ಅಧಿಕಾರಿ ಜಯ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.