
ಬೆಳ್ತಂಗಡಿ ಬಳಿ ನೇತ್ರಾವತಿಯ ಉಪನದಿ ಸೋಮಾವತಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಿಸಿದೆ
ಪ್ರಜಾವಾಣಿ ಚಿತ್ರ/ ಫಕ್ರುದ್ದೀನ್ ಎಚ್.
ಮಂಗಳೂರು: ಜಿಲ್ಲೆಯಲ್ಲಿ 2025ರ ಡಿಸೆಂಬರ್ವರೆಗೆ ಮಳೆಯಾಗಿದ್ದರೂ ನೇತ್ರಾವತಿಯಲ್ಲಿ ನೀರಿನ ಹರಿವು ಈಗಲೇ ಗಣನೀಯವಾಗಿ ಕ್ಷೀಣಿಸಿದೆ. ಜೂನ್ವರೆಗೂ ಮಳೆಯಾಗದಿದ್ದರೇ ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ನೀರನ್ನು ಈಗಿನಿಂದಲೇ ಜತನವಾಗಿ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಲಿಕೆ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯ ಜಲಾಶಯದಲ್ಲಿ ಸದ್ಯಕ್ಕೆ 6 ಮೀಟರ್ ಎತ್ತರದವರೆಗೆ ನೀರಿನ ಸಂಗ್ರಹವಿದೆ. ಇಷ್ಟು ನೀರು ನಗರಕ್ಕೆ ಸುಮಾರು 40 ದಿನಗಳವರೆಗೆ ಪೂರೈಸಲು ಸಾಲುತ್ತದೆ.
‘ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದವರೆಗೂ ಜಲಾಶಯಕ್ಕೆ ನೀರಿನ ಒಳ ಹರಿವು ಇರುತ್ತದೆ. ಈ ವರ್ಷವೂ ನೀರಿನ ಒಳ ಹರಿವು ಇದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ನೀರಿನ ಒಳ ಹರಿವಿನ ಪ್ರಮಾಣ ತೀರಾ ಕಡಿಮೆ ಇದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ನಗರದ ಜನಸಂಖ್ಯೆ ಅಂದಾಜು 5 ಲಕ್ಷದಷ್ಟಿದ್ದು, ಸುಮಾರು 1.5 ಲಕ್ಷ ಕುಟುಂಬಗಳಿವೆ. ಒಟ್ಟು 93 ಲಕ್ಷ ನೀರಿನ ಸಂಪರ್ಕಗಳಿವೆ. ಪ್ರತಿ ವ್ಯಕ್ತಿಯ ದೈನಂದಿನ ಬಳಕೆಗೆ 135 ಲೀಟರ್ಗಳಂತೆ ನಿತ್ಯ 16 ಕೋಟಿ ಲೀಟರ್ಗಳಿಂದ 17 ಕೋಟಿ ಲೀಟರ್ಗಳಷ್ಟು ನೀರು ನಗರಕ್ಕೆ ಪೂರೈಕೆ ಆಗುತ್ತಿದೆ.
ಪಾಲಿಕೆ ವ್ಯಾಪ್ತಿಯ ಪಾಂಡೇಶ್ವರ, ಉರ್ವ, ಕೊಟ್ಟಾರಚೌಕಿ, ಸುರತ್ಕಲ್, ಕಾಟಿಪಳ್ಳ, ಕುದ್ರೋಳಿ, ಬಿಕರ್ನಕಟ್ಟೆ ಮುಂತಾದ ಕಡೆ ನೀರು ಪೂರೈಕೆ ವ್ಯತ್ಯಯವಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.
ಕುದ್ರೋಳಿ ಪರಿಸರದಲ್ಲಿ 15 ದಿನಗಳಿಂದ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಕಾಟಿಪಳ್ಳ ಪ್ರದೇಶದಲ್ಲಿ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ಬೇಸಿಗೆಯಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚುವುದರಿಂದ ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಕೊಳವೆ ಮೂಲಕ ನೀರು ತಲುಪದ ಪ್ರದೇಶಗಳಿಗೆ ಟ್ಯಾಂಕರ್ನಲ್ಲಿ ನೀರು ಪೂರೈಸಲು ಕ್ರಮವಹಿಸಲಾಗುತ್ತಿದೆ ಎಂದು ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.
ನಗರದಲ್ಲಿ 2019ರಲ್ಲಿ ಹಾಗೂ 2023ರಲ್ಲಿ ನಗರದಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿತ್ತು. ಎರಡೂ ವರ್ಷಗಳಲ್ಲಿ ಜೂನ್ನಲ್ಲಿ ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ 0.5 ಮೀಟರ್ ಗಿಂತಲೂ ಕೆಳಗೆ ಇಳಿದಿತ್ತು. ನೀರಿನ ರೇಷನಿಂಗ್ಗೆ ಪಾಲಿಕೆ ಕ್ರಮ ವಹಿಸಿತ್ತು.
ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ತುಂಬೆ ಜಲಾಶಯ ಭರ್ತಿಯಾಗಿದೆ. ಹಾಗಾಗಿ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇಲ್ಲರವಿಚಂದ್ರ ನಾಯಕ್ ಪಾಲಿಕೆ ಆಯುಕ್ತ
ವಸತಿ ಹೆಚ್ಚಳ–ನೀರು ಪೂರೈಕೆ ಮೇಲೆ ಪರಿಣಾಮ
ಪಾಲಿಕೆ ವ್ಯಾಪ್ತಿಯಲ್ಲಿ ವರ್ಷದಿಂದ ವರ್ಷಕ್ಕೆ ನಗರದ ನೀರಿನ ಜನಸಂಖ್ಯೆ ಹೆಚ್ಚುತ್ತಿದೆ. ನಗರದಲ್ಲಿ ಬಹುಮಹಡಿ ಕಟ್ಟಡಗಳು ಸೇರಿದಂತೆ ಐದಕ್ಕೂ ಹೆಚ್ಚು ಮನೆಗಳಿರುವ ಸುಮಾರು ಸಾವಿರಕ್ಕೂ ಹೆಚ್ಚು ಕಟ್ಟಡಗಳು ಪ್ರತಿ ವರ್ಷವೂ ಹೊಸತಾಗಿ ನಿರ್ಮಾಣವಾಗುತ್ತಿವೆ. ಇದು ಕೆಲವು ಪ್ರದೇಶಗಳಲ್ಲಿ ನೀರಿನ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುವುದಕ್ಕೆ ಕಾರಣವಾಗಿವೆ. ಇದು ನೀರು ಪೂರೈಕೆ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತಿವೆ. ಒತ್ತಡ ಸಾಲದೇ ಕೆಲವು ಎತ್ತರದ ಪ್ರದೇಶದ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಎಂಜಿನಿಯರ್ ಒಬ್ಬರು ‘ನಗರದಲ್ಲಿ ಇತ್ತೀಚೆಗೆ ನಿರ್ಮಾಣವಾಗಿರುವ ಕೆಲ ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ 50ಕ್ಕೂ ಅಧಿಕ ಫ್ಲ್ಯಾಟ್ಗಳಿರುತ್ತವೆ. ಅಷ್ಟು ಮನೆಗಳಿಗೆ ನೀರು ಪೂರೈಸಲು ಅವರು ಭಾರಿ ಪ್ರಮಾಣದ ತೊಟ್ಟಿಗಳನ್ನು ನಿರ್ಮಿಸಿಕೊಂಡಿರುತ್ತಾರೆ. ನಿರ್ದಿಷ್ಟ ಪ್ರದೇಶದಲ್ಲಿ ಒಮ್ಮೆಗೆ ನೂರಿನ್ನೂರು ಮನೆಗಳಿಗೆ ಹೆಚ್ಚುವರಿಯಾಗಿ ನೀರು ಪೂರೈಸಬೇಕಾದಾಗ ಸಹಜವಾಗಿಯೇ ನೀರು ಪೂರೈಕೆ ಮೇಲೂ ಪರಿಣಾಮ ಉಂಟಾಗುತ್ತದೆ’ ಎಂದರು.
‘ಸದ್ಯಕ್ಕೆ ಕೊರತೆ ಎದುರಾಗದು‘
ತುಂಬೆ ಜಲಾಶಯದಲ್ಲಿ ಅಂದಾಜು 104 ಲಕ್ಷ ಕ್ಯುಬಿಕ್ ಮೀಟರ್ ಸಂಗ್ರಹವಿದೆ. ಇನ್ನೂ ಒಳಹರಿವು ಪೂರ್ತಿ ನಿಂತಿಲ್ಲ. ಎಎಂಆರ್ ಅಣೆಕಟ್ಟೆಯಲ್ಲಿ 120 ಲಕ್ಷ ಕ್ಯುಬಿಕ್ ಮೀಟರ್ ನೀರಿನ ಸಂಗ್ರಹವಿದೆ. ತುಂಬೆ ಜಲಾಶಯದಲ್ಲಿ ನೀರು ಕಡಿಮೆಯಾದರೆ ಎಎಂಆರ್ ಜಲಾಶಯದ ನೀರನ್ನು ಹರಿಸಬಹುದು. ಹರೇಕಳ ಅಣೆಕಟ್ಟೆಯಲ್ಲೂ 140 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹವಿದೆ. ಅದನ್ನು ತುಂಬೆ ಜಲಾಶಯಕ್ಕೆ ಪಂಪ್ ಮಾಡಿ ಪೂರೈಸಬಹುದು. ಹಾಗಾಗಿ ಮೇವರೆಗೆ ಮಳೆಯಾಗದಿದ್ದರೂ ನೀರಿನ ಅಭಾವ ಅಷ್ಟಾಗಿ ಬಾಧಿಸದು. ಮೇ ನಂತರವೂ ಮಳೆಯಾಗದಿದ್ದರೆ ಸಮಸ್ಯೆ ಎದುರಾದೀತು ಎಂದು ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.