ಉಳ್ಳಾಲ (ದಕ್ಷಿಣ ಕನ್ನಡ): ಬಸ್ ನಲ್ಲಿ ಮಹಿಳೆ ಕಳೆದುಕೊಂಡ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಉಳ್ಳಾಲ ಠಾಣೆಯ ಪೊಲೀಸರಿಗೆ ತಲುಪಿಸಿ, ಮಹಿಳೆಗೆ ಮರಳಿ ಸಿಗುವಂತೆ ಮಾಡಿದ್ದಾರೆ.
ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ 44ಸಿ ಬಸ್ಸಿನಲ್ಲಿ ಬಿಸಿರೋಡ್ ನ ಮಹಿಳೆ ತಸ್ಲಿಮಾ ಭಾನುವಾರ ಪ್ರಯಾಣಿಸುತ್ತಿರುವಾಗ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು.
ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಮದುವೆ ಸಮಾರಂಭಕ್ಕೆ ತೆರಳುವಾಗ ಘಟನೆ ನಡೆದಿತ್ತು. ಬಸ್ ನಲ್ಲಿ ಸಿಕ್ಕ ಬಂಗಾರದ ಬಳೆಯನ್ನು ಬಸ್ ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಮಂಜನಾಡಿ ಅವರು ಬಸ್ ಮಾಲೀಕ ಅಬ್ದುಲ್ ರಜಾಕ್ ಅವರ ಗಮನಕ್ಕೆ ತಂದಿದ್ದರು. ಅವರು ಜ.2 ರಂದು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದರು.
ಇದೇ ಸಂದರ್ಭ ಚಿನ್ನ ಕಳೆದುಕೊಂಡ ಮಹಿಳೆ ತಸ್ಲೀಮಾ ಅವರು ಠಾಣೆಗೆ ಬಂದಿದ್ದು, ಅವರಿಗೆ ಎಸ್. ಐ ಶಿವು ಕುಮಾರ್ ಸಮ್ಮುಖದಲ್ಲಿ ಚಿನ್ನದ ಬಳೆಯನ್ನು ಮರಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.