
ಮಂಗಳೂರು: ಮ್ಯಾಟ್ರಮೋನಿ ಆನ್ಲೈನ್ ವೇದಿಕೆಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ಒಂಬತ್ತು ಯುವತಿಯರಿಗೆ ವಂಚಿಸಿರುವ ಆರೋಪಿಯನ್ನು ಇಲ್ಲಿಯ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರಾ (32) ಬಂಧಿತ ಆರೋಪಿ. ‘ಬಂಧಿತ ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸುಶಾಂತ್ ಪೂಜಾರಿ ಮೊದಲು ಉಡುಪಿಯ ಯುವತಿಯನ್ನು 2021ರಲ್ಲಿ ಮದುವೆಯಾಗಿದ್ದ. ನಂತರ ಮಹಾರಾಷ್ಟ್ರದ ಘನಸೋಳಿಯ ಯುವತಿಯನ್ನು 2025ರ ಫೆ.2ರಂದು ನವಿಮುಂಬೈನಲ್ಲಿ ಮದುವೆಯಾಗಿದ್ದ. ಆಕೆಯಿಂದ ಹಂತ ಹಂತವಾಗಿ ₹6.60 ಲಕ್ಷ ಪಡೆದು, ಬಳಿಕ ನಾಪತ್ತೆಯಾಗಿದ್ದ. ಅನುಮಾನಗೊಂಡ ಯುವತಿ ಪೂರ್ವಾಪರ ವಿಚಾರಿಸಿದಾಗ, ಆಗಲೇ ಮದುವೆಯಾಗಿದ್ದು ಅನೇಕ ಯುವತಿಯರಿಗೆ ವಂಚಿಸಿದ್ದು ಗೊತ್ತಾಗಿತ್ತು.
ಯುವತಿ ಕಾವೂರು ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 318(4) (ವಂಚನೆ), 316(1) ಮತ್ತು 316(2) (ನಂಬಿಕೆದ್ರೋಹ), 336(3) (ಫೋರ್ಜರಿ ನಡೆಸಿ ವಂಚನೆ), 340(1)ರ (ನಕಲಿ ದಾಖಲೆ ನೀಡಿ ವಂಚನೆ) ಅಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
‘2021ರಲ್ಲಿ ಉಡುಪಿ ಯುವತಿಯ ಜೊತೆ ಮದುವೆ ಆಗಿದ್ದು, ಉಡುಪಿ, ಮುಂಬೈ, ಬೆಂಗಳೂರಿನ ತಲಾ ಇಬ್ಬರು ಯುವತಿಯರು ಹಾಗೂ ಕಾರ್ಕಳದ ಒಬ್ಬ ಯುವತಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಕೆಲವರಿಂದ ಹಣವನ್ನೂ ಪಡೆದುಕೊಂಡಿದ್ದ’ ಎಂದು ಮಾಹಿತಿ ನೀಡಿದರು.
ಮಂಗಳೂರು ಉರ್ವ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ, ಉಡುಪಿ ಜಿಲ್ಲೆಯ ಕೋಟ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ ಕಳವು ಪ್ರಕರಣ, ಮಹಾರಾಷ್ಟ್ರದ ಅರ್ನಾಲ್ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ ಮಾನವ ಕಳ್ಳಸಾಗಣೆ, ಅಕ್ರಮ ಬಂಧನ ಮತ್ತು ಅತ್ಯಾಚಾರ ಮತ್ತು ಪೊಕ್ಸೊ ಪ್ರಕರಣಗಳಲ್ಲೂ ಸುಶಾಂತ್ ಪೂಜಾರಿ ಆರೋಪಿಯಾಗಿದ್ದ. ಆತ ಐಟಿಐ ವರೆಗೆ ಓದಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವಿ ಮುಂಬೈನ ಯುವತಿಯನ್ನು ಮದುವೆಯಾಗಲು ನೆರವಾಗಿದ್ದ, ಸುಶಾಂತ್ ತನ್ನ ಅಳಿಯನೆಂದು ಹೇಳಿಕೊಂಡು, ಮುಂಬೈನಲ್ಲಿ ನಡೆದಿದ್ದ ಮದುವೆಯಲ್ಲಿ ಭಾಗಿಯಾಗಿದ್ದ ಮೂಲ್ಕಿಯ ಕಾರು ಚಾಲಕ ಭಾಸ್ಕರ್ ಎಂಬಾತನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.