
ಮಂಗಳೂರು: ದಶಕದ ಈಚೆಗೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಬರುವ ಅನುದಾನಗಳು ಕಡಿಮೆಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಳೀಯ ತೆರಿಗೆ ಸಂಗ್ರಹ, ಆದಾಯ ಸೃಷ್ಟಿಯ ಮೇಲೆ ಅವಲಂಬಿತವಾಗಿವೆ. ಆದರೆ, ಕೆಲವು ಖಾಸಗಿ ಉದ್ದಿಮೆಗಳು, ಟೆಲಿಕಾಂ ಆಪರೇಟರ್ಗಳಿಂದ ಬರಬೇಕಾಗಿರುವ ತೆರಿಗೆ ಬಾಕಿ ಮೊತ್ತವು ಗ್ರಾ.ಪಂ.ಗಳ ಅಭಿವೃದ್ಧಿಗೆ ತೊಡಕಾಗಿದೆ.
ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳು ಇದ್ದು, ಇವುಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮೊಬೈಲ್ ಟವರ್ಗಳಲ್ಲಿ 650ಕ್ಕೂ ಹೆಚ್ಚು ಮೊಬೈಲ್ ಟವರ್ಗಳ ನಿರ್ವಾಹಕರು (ಆಪರೇಟರ್ಗಳು) ಒಟ್ಟು ₹1.26 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. 2024ರಲ್ಲಿ ₹65.43 ಲಕ್ಷ ಮೊತ್ತ ಇದ್ದ ಟೆಲಿಕಾಂ ನಿರ್ವಾಹಕರ ತೆರಿಗೆ ಬಾಕಿ ಹಣವು 2026ರಲ್ಲಿ ದುಪ್ಪಟ್ಟು ಆಗಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಅತಿ ಹೆಚ್ಚು ಟವರ್ಗಳ ತೆರಿಗೆ ಪಾವತಿ ಬಾಕಿ ಇದೆ. ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾ ಪಂಚಾಯಿತಿಯಿಂದ ಪಡೆದ ಮಾಹಿತಿಯಲ್ಲಿ ಈ ವಿವರ ಬಹಿರಂಗವಾಗಿದೆ.
ಪುತ್ತೂರು ತಾಲ್ಲೂಕಿನ ಒಟ್ಟು 76 ಮೊಬೈಲ್ ಟವರ್ ನಿರ್ವಾಹಕರಿಂದ ₹19.06 ಲಕ್ಷ, ಬೆಳ್ತಂಗಡಿ ತಾಲ್ಲೂಕಿನ 145 ಮೊಬೈಲ್ ಟವರ್ಗಳ ನಿರ್ವಾಹಕರಿಂದ ಒಟ್ಟು ₹17.14 ಲಕ್ಷ ತೆರಿಗೆ ಬಾಕಿ ಇದೆ.
ಮೊಬೈಲ್ ಟವರ್ಗಳು ಸಾರ್ವಜನಿಕ ಸೇವಾ ವಲಯಕ್ಕೆ ಸೇರುವುದರಿಂದ ಕೆಲವು ನಿರ್ವಾಹಕರು ತೆರಿಗೆ ಪಾವತಿಸಲು ನಿರಾಕರಿಸುತ್ತಾರೆ. ಈ ಬಗ್ಗೆ ಕೆಲವು ನಿರ್ವಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆದೇಶ ಬಂದಿದ್ದರಿಂದ, ಟವರ್ ನಿರ್ವಾಹಕರು ಈಗ ಹಣ ಪಾವತಿಸಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಮೊಬೈಲ್ ಟವರ್ಗಳಿಗೆ ವಿನಾಯಿತಿ ಇದೆ. ಈ ಪ್ರಕರಣವೂ ನ್ಯಾಯಾಲಯದಲ್ಲಿದೆ ಎಂದು ಪಿಡಿಒ ಒಬ್ಬರು ತಿಳಿಸಿದರು.
‘ಉಜಿರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ಶೇ 73ರಷ್ಟು ತೆರಿಗೆ ಸಂಗ್ರಹವಾಗಿದೆ. ಸರ್ಕಾರಿ ಸ್ವಾಮ್ಯದ ಟವರ್ ಹೊರತುಪಡಿಸಿ ಗ್ರಾ.ಪಂ. ವ್ಯಾಪ್ತಿಯಲ್ಲಿ 9 ಟವರ್ಗಳು ಇವೆ. ಕಳೆದ ವರ್ಷ ಎಲ್ಲ ಟವರ್ಗಳ ತೆರಿಗೆ ಪಾವತಿಯಾಗಿದೆ. ಈ ವರ್ಷ ತೆರಿಗೆ ಪಾವತಿಗೆ ಮಾರ್ಚ್ವರೆಗೆ ಕಾಲಾವಕಾಶವಿದೆ’ ಎನ್ನುತ್ತಾರೆ ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ.
ಕಡಬ ತಾಲ್ಲೂಕು ಕೊಳ್ನಾಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ವರ್ಷ ಟವರ್ ನಿರ್ವಾಹಕರಿಂದ ತೆರಿಗೆ ಪಾವತಿಯಾಗಿತ್ತು. ಈ ಬಾರಿ ಇನ್ನೂ ತೆರಿಗೆ ಪಾವತಿ ಆಗದ ಕಾರಣ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಿಡಿಒ ಹರೀಶ್ ಕೆ.ಎ. ತಿಳಿಸಿದರು.
ಹಿಂದೆ ಗ್ರಾ.ಪಂ.ಗಳಿಗೆ ತಲಾ ಆದಾಯ ಆಧರಿಸಿ ಅನುದಾನ ಬರುತ್ತಿತ್ತು. ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ ಅನುದಾನ ಸಿಗುತ್ತದೆ. ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಶೇ 60 ಸಿಬ್ಬಂದಿ ಸಂಬಳಕ್ಕೆ ಹಾಗೂ ಶೇ 40ರಷ್ಟು ವಿದ್ಯುತ್ ಬಿಲ್ ಪಾವತಿಗೆ (ಎಸ್ಕ್ರೊ ಖಾತೆ) ಹಂಚಿಕೆಯಾಗುತ್ತದೆ. ಅನುದಾನ ಬಿಡುಗಡೆ ಹಂತದಲ್ಲೇ ಇವು ನಿಗದಿತ ಉದ್ದೇಶಕ್ಕೆ ಪ್ರತ್ಯೇಕ ಹೆಡ್ನಲ್ಲಿ ಬರುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಇವನ್ನು ಬಳಸಲು ಸಾಧ್ಯವಾಗದು ಎನ್ನುತ್ತಾರೆ ಬಂಟ್ವಾಳ ತಾಲ್ಲೂಕಿನ ಪಿಡಿಒ ಒಬ್ಬರು.
‘10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವಲ್ಲಿ ವಾರ್ಷಿಕ ₹10 ಲಕ್ಷ, 10 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇರುವ ಗ್ರಾ.ಪಂ.ಗೆ ₹15 ಲಕ್ಷ ವಾರ್ಷಿಕ ಅನುದಾನ ರಾಜ್ಯ ಸರ್ಕಾರದಿಂದ ದೊರೆಯುತ್ತದೆ. ಅದರಲ್ಲಿ ₹10 ಲಕ್ಷ ಸಿಬ್ಬಂದಿ ವೇತನ ಮತ್ತು ₹5 ಲಕ್ಷ ವಿದ್ಯುತ್ ಬಿಲ್ಗೆ ನಿಗದಿಯಾಗಿರುತ್ತದೆ. ಗ್ರಾ.ಪಂ.ಗಳು ಕಟ್ಟಡಗಳ ತೆರಿಗೆ, ವ್ಯಾಪಾರ ಪರವಾನಗಿ, ಸಂತೆ ಮಾರುಕಟ್ಟೆ, ವಾಣಿಜ್ಯ ಮಳಿಗೆ, ಮನೆ ತೆರಿಗೆ, ನೀರಿನ ತೆರಿಗೆ ಹೀಗೆ ಸ್ಥಳೀಯವಾಗಿ ಆದಾಯದ ಮೂಲ ಸೃಷ್ಟಿಸಿಕೊಳ್ಳಬೇಕು. ಹಿಂದುಳಿದ ಹಳ್ಳಿಗಳ ಗ್ರಾ.ಪಂ.ಗಳಿಗೆ ಇದು ಸವಾಲಿನ ಕೆಲಸ’ ಎನ್ನುತ್ತಾರೆ ಪಿಡಿಒವೊಬ್ಬರು.
‘ಈ ನಡುವೆ ತೆರಿಗೆ ಸಂಗ್ರಹಿಸುವುದೂ ಸುಲಭವಲ್ಲ. ಮನೆ–ಮನೆ ತೆರಿಗೆ ಎಲ್ಲರಿಗೂ ಸಮಾನವಾಗಿ ಇರುತ್ತದೆ. ಬಿಪಿಎಲ್ನವರಿಗೆ ಪ್ರತ್ಯೇಕ ಇರುವುದಿಲ್ಲ. ಕೆಲವು ಕಡುಬಡುವರು ಹಣವಿಲ್ಲದೆ ತೆರಿಗೆ ಉಳಿಸಿಕೊಳ್ಳುತ್ತಾರೆ. ಇನ್ನು ಕೆಲವು ಉದ್ಯಮದವರೂ ದೊಡ್ಡ ಮೊತ್ತದ ತೆರಿಗೆ ಉಳಿಸಿಕೊಳ್ಳುತ್ತಾರೆ. ನಿರಂತರ ಪ್ರಯತ್ನ ನಡೆಸಿದರೂ ಯಶಸ್ಸು ಸಿಗುವುದು ಕಷ್ಟ’ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ ಇರುವ ಗ್ರಾ.ಪಂ.ಗಳಲ್ಲಿ ಕನಿಷ್ಠ ₹5 ಲಕ್ಷದಿಂದ ₹1.60 ಕೋಟಿ ವಾರ್ಷಿಕ ಆದಾಯ ಪಡೆಯುವ ಪಂಚಾಯಿತಿಗಳು ಇವೆ. ಸರ್ಕಾರಗಳಿಂದ ಬರುವ ಅನುದಾನದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸುವುದು ಕಷ್ಟ. ನರೇಗಾ ಯೋಜನೆ ಇದ್ದರೂ, ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸುವವರೇ ಹೆಚ್ಚು. ಪ್ರತಿ ಪಂಚಾಯಿತಿಗೆ ವರ್ಷಕ್ಕೆ ₹1 ಕೋಟಿ ಅನುದಾನದಂತೆ, ಸತತ ಐದು ವರ್ಷ ಇದೇ ಮೊತ್ತದ ಅನುದಾನ ಸಿಕ್ಕಿದರೆ ಸುಧಾರಣೆ ಸಾಧ್ಯವಾಗುತ್ತದೆ ಎಂದು ನಿವೃತ್ತಿ ಅಂಚಿನಲ್ಲಿರುವ ಪಿಡಿಒ ಒಬ್ಬರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.