ಮಂಗಳೂರು: ಬಳಕೆಗೆ ಬಾರದ ಹಳೆಯ ಮೀನುಗಾರಿಕಾ ದೋಣಿಗಳನ್ನು ದುರಸ್ತಿಗೊಳಿಸಿ, ಜನನಿಬಿಡ ಪ್ರದೇಶಗಳಲ್ಲಿ ಇಡುವ ಮೂಲಕ ಅವುಗಳನ್ನು ವಿಶೇಷ ಆಕರ್ಷಣೆಯ ಕೇಂದ್ರವಾಗಿ ರೂಪಿಸಲು ಯೋಚಿಸಲಾಗಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದರು.
ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಲೇಜಿನ ಆವರಣದಲ್ಲಿ ಇಟ್ಟಿರುವ ಹೊಸ ರೂಪ ಪಡೆದ ಹಳೆ ದೋಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ರೀತಿ ನಿರುಪಯುಕ್ತವಾಗಿರುವ ದೋಣಿಗಳನ್ನು ಅಲಂಕರಿಸಿ, ಶಾಲೆ, ಉದ್ಯಾನ, ಇನ್ನಿತರ ಜನಾಕರ್ಷಣೆಯ ತಾಣದಲ್ಲಿ ಇಡುವ ಯೋಜನೆಯಿದೆ. ಹಳೆಯ ದೋಣಿಗಳನ್ನು ಖರೀದಿಸಿ, ಮರು ಬಳಕೆ ಮಾಡುವುದರಿಂದ ಮೀನುಗಾರರಿಗೆ ಹಣಕಾಸಿನ ನೆರವು ದೊರೆತಂತಾಗುತ್ತದೆ. ಇಂತಹ ಸುಮಾರು 30ರಷ್ಟು ದೋಣಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಮೀನುಗಾರಿಕಾ ಕಾಲೇಜಿನಲ್ಲಿ ಹೊಸ ಜಲಕೃಷಿ ತಂತ್ರಜ್ಞಾನ ಸಂಶೋಧನೆ ಮತ್ತು ಶೈಕ್ಷಣಿಕ ಮೀನು ಸಾಕಾಣಿಕಾ ಕೇಂದ್ರದ ಆಧುನೀಕರಣ ಕಾಮಗಾರಿಯನ್ನು ₹7.90 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೀನು ಕೃಷಿ ಮಾಡುವವರಿಗೆ ಗುಣಮಟ್ಟದ ಮೀನು ಮರಿಗಳ ಉತ್ಪಾದನೆ ಹಾಗೂ ವಿತರಣೆಗೆ ಸೌಲಭ್ಯ ಒದಗಿಸುವುದು, ಸಂಶೋಧನಾ ಸೌಲಭ್ಯ ವೃದ್ಧಿ, ಸಂಶೋಧಕರಿಗೆ ಸ್ಮಾರ್ಟ್ ಮೀನುಗಾರಿಕೆ ತಂತ್ರಜ್ಞಾನ ಸೇರಿದಂತೆ ಅನೇಕ ಕಾಮಗಾರಿಗಳು ಈ ಕಾರ್ಯಕ್ರಮದಡಿ ನಡೆಯುತ್ತವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ ವೇಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.