ADVERTISEMENT

ರಾಜ್ಯದಲ್ಲಿ ಮುಚ್ಚಿದ 900ಕ್ಕೂ ಅಧಿಕ ಕನ್ನಡ ಶಾಲ: ಪಕ್ಕಲಡ್ಕ ಕಳವಳ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:55 IST
Last Updated 22 ಫೆಬ್ರುವರಿ 2026, 1:55 IST
ಮೂಡುಬದಿರೆಯ ಕಡಂದಲೆಯಲ್ಲಿ ಶನಿವಾರ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರನ್ನು ತೆರೆದ ಜೀಪಿನಲ್ಲಿ ಬರಮಾಡಿಕೊಳ್ಳಲಾಯಿತು 
ಮೂಡುಬದಿರೆಯ ಕಡಂದಲೆಯಲ್ಲಿ ಶನಿವಾರ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರನ್ನು ತೆರೆದ ಜೀಪಿನಲ್ಲಿ ಬರಮಾಡಿಕೊಳ್ಳಲಾಯಿತು    

ಮೂಡುಬಿದಿರೆ: ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ ಇತ್ತ ಸರ್ಕಾರಿ ಕನ್ನಡ ಶಾಲೆಗಳ ಸಂಖ್ಯೆ ಕುಸಿಯುತ್ತಿದೆ. 5 ವರ್ಷಗಳಲ್ಲಿ ಸುಮಾರು 900ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ವಿಲೀನ ಹಾಗೂ ಮುಚ್ಚಲಾಗಿದೆ. ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಸದೃಢಗೊಳಿಸಲು ಸರ್ಕಾರ ನಿರಾಸಕ್ತಿ ವಹಿಸುತ್ತಿರುವುದು. ಇಂಗ್ಲಿಷ್‌ ಶಾಲೆಗಳ ವ್ಯಾಮೋಹ ಹೆಚ್ಚುತ್ತಿರುವುದು ಕನ್ನಡ ಶಾಲೆಗಳ ಸಂಖ್ಯೆ ಕುಸಿಯಲು ಕಾರಣ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಹೇಳಿದರು.

ಕಡಂದಲೆಯ ಬಿಲ್ಲವ ಸಂಘದಲ್ಲಿ ನಡೆದ ಶನಿವಾರ ತಾಲ್ಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯವು ಸಂಸ್ಕೃತಿ, ಇತಿಹಾಸ ಮತ್ತು ಬದುಕಿನ ಪ್ರತಿಬಿಂಬವಾಗಿದೆ. ಇದು ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಮತ್ತು ವಚನಗಳಂತಹ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾಗಿದೆ. ಕನ್ನಡ ಸಾಹಿತ್ಯವು ಕೇವಲ ಬರವಣಿಗೆಯಲ್ಲ, ಅದು ಕನ್ನಡಿಗರ ಆತ್ಮ. ಹಳೆಯ ತತ್ವಗಳೊಂದಿಗೆ ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಕನ್ನಡ ಸಾಹಿತ್ಯವು ಮುಂದಿನ ಪೀಳಿಗೆಗೆ ಭಾಷಾ ಪ್ರೇಮವನ್ನು ತಿಳಿಸುವ ದಾರಿದೀಪವಾಗಬೇಕು ಎಂದು ಹೇಳಿದರು.

ADVERTISEMENT

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕಟೀಲು ಕ್ಷೇತ್ರದ ಕಮಲಾದೇವಿ ಅಸ್ರಣ್ಣ, ಕಾನೂನಿನಲ್ಲಿ ಅಡಕವಾಗಿರುವ ಭಾಷೆ ಕನ್ನಡ. ಮೊಬೈಲ್‌ನಿಂದ ಮಸ್ತಕ ಬೆಳೆಯುವುದಿಲ್ಲ. ಪುಸ್ತಕಗಳನ್ನು ಓದುವ ಗೀಳನ್ನು ಬೆಳೆಸಿಕೊಳ್ಳುವುದರಿಂದ ಮಸ್ತಕ ಬೆಳೆಯುತ್ತದೆ. ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದಕ್ಕೂ ಸಾರ್ಥಕವಾಗುತ್ತದೆ ಎಂದರು.

ಕೃತಿ ಬಿಡುಗಡೆ: ಎಂ. ರಾಘವೇಂದ್ರ ಭಂಡಾರ್ಕರ್ ಅವರ ಕವನ ಸಂಕಲನ 'ಓ ಮನಸೇ', ಹಮೀದ್ ಪಕ್ಕಲಡ್ಕ ಅವರ ಕಥಾ ಸಂಕಲನ 'ಹಾದಿಯೇ ಇಲ್ಲದ ಹಾದಿ' ಹಾಗೂ ಆಳ್ವಾಸ್‌ನ ಬಿಎಡ್ ವಿದ್ಯಾರ್ಥಿ ಅಮೋಘ ಸಿದ್ಧ ವಿಠಲ ಗೌಡ ಪಾಟೀಲ ಅವರ ಕವನ ಸಂಕಲನ 'ಭಾವ ಅಮೋಘ' ಬಿಡುಗಡೆ ಮಾಡಲಾಯಿತು.

ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ.,ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ., ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ. ಧನಕೀರ್ತಿ ಬಲಿಪ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ್ ಉಡುಪ, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಪ್ರಮುಖರಾದ ಸಂಪತ್ ಸಾಮ್ರಾಜ್ಯ, ಸಿ.ಎಚ್.ಗಫೂರ್, ಹಿರಿಯ ವಕೀಲ ಕೆ.ಆರ್. ಪಂಡಿತ್, ಸಂಶೋಧಕ ಪುಂಡಿಕಾಯ್ ಗಣಪಯ್ಯ ಭಟ್, ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಹಿರಿಯ ವಕೀಲ ಕೆ.ಆರ್ ಪಂಡಿತ್ ಅವರು ಧ್ವಜಾರೋಹಣ ನೆರವೇರಿಸಿದರು. ಸುಬ್ರಹ್ಮಣ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಅವರು ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಿದರು.

ಸಮಿತಿಯ ಗೌರವಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಶ್ರೀನಾಥ್ ಮಾತನಾಡಿದರು. ಮೂಡುಬಿದಿರೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿದರು. ಎಲ್.ಜೆ.ಫೆರ್ನಾಂಡಿಸ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.