
ಮಂಗಳೂರು: ತಾಯಿ ಸ್ವರೂಪಿಯಾದ ಮಾತೃಭಾಷೆಯ ಸಂರಕ್ಷಣೆ ಹಾಗೂ ಪ್ರಗತಿಗೆ ಪ್ರತಿಯೊಬ್ಬರೂ ಆಸ್ಥೆ ವಹಿಸಬೇಕು ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಗರೇಶ್ ಹೇಳಿದರು.
ಇಲ್ಲಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಆಶ್ರಯದಲ್ಲಿ ಶನಿವಾರ ನಡೆದ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನನಿ ಹಾಗೂ ಜನ್ಮಭೂಮಿ ಸ್ವರ್ಗದಂತೆ ಬೆಳೆಯಬೇಕು. ಜನನಿ, ಗೋಮಾತೆ, ಜೀವ ನೀಡುವ ಪ್ರಕೃತಿ ಹಾಗೂ ನಮ್ಮನ್ನು ಬೆಳೆಸುವವರು ಸದಾ ಮಾತೃಸ್ವರೂಪಿಗಳು. ಅವರ ಬಗ್ಗೆ ಯಾವತ್ತೂ ಕಾಳಜಿ ಇರಬೇಕು. ಮಾತೃಭಾಷೆಯ ಮೂಲಕ ನಾವು ಇತರ ಭಾಷೆಗಳನ್ನು ಕಲಿಯುತ್ತೇವೆ. ಪ್ರತಿ ವ್ಯಕ್ತಿಯ ಬೆಳವಣಿಗೆಗೆ ಮಾತೃಭಾಷೆ ಮುಖ್ಯ ಮಾಧ್ಯಮವಾಗಿದೆ ಎಂದರು.
ಕೊಂಕಣಿ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗಾಗಿ ವಿಮಲಾ ವಿ. ಪೈ ಹೆಸರಿನಲ್ಲಿ ನೀಡುವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಕವಿ ಶಶಿಕಾಂತ ಪೂನಾಜಿ ಅವರಿಗೆ, ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಲೇಖಕ ಬಾಲಚಂದ್ರ ಗಾಂವಕರ ಅವರಿಗೆ ನೀಡಲಾಯಿತು. ವಿಶ್ವ ಕೊಂಕಣಿ ಜೀವನ ಸಿದ್ಧ ಸನ್ಮಾನಕ್ಕೆ ಆಯ್ಕೆಯಾಗಿದ್ದ ಸಾಹಿತಿ ಪುಂಡಲೀಕ ಎನ್. ನಾಯಕ್ ಅವರು ಅನಾರೋಗ್ಯದ ಕಾರಣ ಗೈರಾಗಿದ್ದರು.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಈಶ್ವರಾನಂದ ಮಹಿಳಾ ಸೇವಾಶ್ರಮದ (ಅನಾಥಾಲಯ ಸೇವೆ) ಅನುಪಮಾ ಶೆಣೈ ಹಾಗೂ ಹೊಸಬೆಳಕು ಸೇವಾ ಸಂಸ್ಥೆಯ (ನಿರ್ಗತಿಕರ ಸೇವೆ) ತನುಲಾ ತರುಣ್ ಸ್ವೀಕರಿಸಿದರು.
ಮುಕುಂದ ಪ್ರಭು, ರೋಕಿ ಮಿರಾಂದ, ಎರಿಕ್ ಒಝೇರಿಯೊ, ಮಾಧವಿ ಸರದೇಸಾಯಿ, ಗೋಕುಲದಾಸ ಪ್ರಭು, ಉಳ್ಳಾಲ ಮೋಹನ ಕುಮಾರ ಸೇರಿ ಒಟ್ಟು ಆರು ಮಂದಿಯ ಭಾವಚಿತ್ರಗಳನ್ನು ವಿಶ್ವ ಕೊಂಕಣಿ ಕೇಂದ್ರದ ಕೀರ್ತಿ ಮಂದಿರದಲ್ಲಿ ಅನಾವರಣಗೊಳಿಸಿ, ಸಾಧಕರ ಪರಿಚಯ ಮಾಡಲಾಯಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಪೈ ವಂದಿಸಿದರು. ವಿಜಯಲಕ್ಷ್ಮಿ ನಾಯಕ್ ನಿರೂಪಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಚೇರ್ಮನ್ ಪಿ. ದಯಾನಂದ ಪೈ, ಉಪಾಧ್ಯಕ್ಷ ವಿಲಿಯಂ ಡಿಸೋಜ, ರಮೇಶ್ ನಾಯ್ಕ್, ಕೋಶಾಧಿಕಾರಿ ಬಿ.ಆರ್. ಭಟ್, ಸಹ ಕಾರ್ಯದರ್ಶಿ ನಾರಾಯಣ ನಾಯ್ಕ್, ಸಿಎಒ ಬಿ. ದೇವದಾಸ್ ಪೈ, ಸಾಹಿತಿ ಮೆಲ್ವಿನ್ ರೋಡ್ರಿಗಸ್, ಕಸ್ತೂರಿ ಮೋಹನ್ ಪೈ, ಗಿಲ್ಬರ್ಟ್ ಡಿಸೋಜ, ವಾತಿಕಾ ಪೈ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.