ADVERTISEMENT

ಮೂಡುಬಿದಿರೆ: ಜೀವ ಉಳಿಸಿದ ಬಸ್ ಚಾಲಕನಿಗೆ ಸನ್ಮಾನ 

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 12:55 IST
Last Updated 21 ಜನವರಿ 2025, 12:55 IST
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ತುಳುವೆರ್ ಬೆದ್ರ ಬಳಗದಿಂದ ನಿಶ್ಮಿತಾ ಬಸ್ ಚಾಲಕ ಕಲಂದರ್ ಶಾಫಿ ಅವರನ್ನು ಸನ್ಮಾನಿಸಲಾಯಿತು
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ತುಳುವೆರ್ ಬೆದ್ರ ಬಳಗದಿಂದ ನಿಶ್ಮಿತಾ ಬಸ್ ಚಾಲಕ ಕಲಂದರ್ ಶಾಫಿ ಅವರನ್ನು ಸನ್ಮಾನಿಸಲಾಯಿತು   

ಮೂಡುಬಿದಿರೆ: ಸಮೀಪದ ತೋಡಾರಿನ ಬಂಗಬೆಟ್ಟು ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ನಿಶ್ಮಿತಾ ಬಸ್ ಚಾಲಕ ಕಲಂದರ್ ಶಾಫಿ ಅವರನ್ನು ‘ತುಳುವೆರ್ ಬೆದ್ರ’ ಬಳಗದಿಂದ ಮಂಗಳವಾರ ಸನ್ಮಾನಿಸಲಾಯಿತು.

ತೋಡಾರು ಬಂಗಬೆಟ್ಟು ಬಳಿ ಇತ್ತೀಚೆಗೆ ಕಾರು ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಸಿದ್ಧಕಟ್ಟೆಯ ಮೋಹನ ಗೌಡ ಮೃತಪಟ್ಟಿದ್ದರು. ಅವರ ಸಹೋದರ ನಾರಾಯಣ ಗೌಡ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಅದೇ ಹೊತ್ತಿಗೆ ಮಂಗಳೂರಿನಿಂದ ಮೂಡುಬಿದಿರೆಗೆ ಬರುತ್ತಿದ್ದ ನಿಶ್ಮಿತಾ ಬಸ್‌ನ ಚಾಲಕ ಕಲಂದರ್ ಶಾಫಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುವನ್ನು ಗಮನಿಸಿ ಬಸ್‌ನಲ್ಲಿ ಕೂರಿಸಿಕೊಂಡು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದರು.

ತಕ್ಷಣ ಆಸ್ಪತ್ರೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದರು. ಬಸ್ ಚಾಲಕನ ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮೊಬೈಲ್ ರಿಟೈಲರ್ಸ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿ ಸಮಾರಂಭದಲ್ಲಿ ತುಳುವೆರ್ ಬೆದ್ರ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಳಗದ ಪ್ರಮುಖರಾದ ರಾಜೇಶ್ ಕಡಲಕೆರೆ, ಶೇಖರ್ ಬೊಳ್ಳಿ, ಕ್ಲಾರಿಯೊ ಮೂಡುಬಿದಿರೆ, ಅಶ್ಫಾಕ್ ಮಿಜಾರು, ಸಂತೋಷ್ ಶೆಟ್ಟಿ, ಹಫೀಝ್, ಮೊಬೈಲ್ ರಿಟೈಲರ್ಸ್ ಸಂಘದ ಅಧ್ಯಕ್ಷ ಸಫ್ವಾನ್, ಅಶ್ರಫ್ ವಾಲ್ಪಾಡಿ, ನವೀನ್ ಟಿ.ಆರ್., ಸಮದ್ ಕಾಟಿಪಳ್ಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.