ರಾಮಕುಂಜ (ಉಪ್ಪಿನಂಗಡಿ): ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಸಹಯೋಗದಲ್ಲಿ ರಾಮಕುಂಜ ಪಿಯು ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ– ಬಾಲಕಿಯರ ಕಬಡ್ಡಿ ಟೂರ್ನಿಯ ಸಮಾರೋಪ ಭಾನುವಾರ ನಡೆಯಿತು.
14 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಮಂಡ್ಯ, ಬಾಲಕಿಯರ ವಿಭಾಗದಲ್ಲಿ ದ.ಕ. ಹಾಗೂ 17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರು, ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲಾ ತಂಡ ಚಾಂಪಿಯನ್ ಆಗಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿವೆ.
14 ವರ್ಷದ ಬಾಲಕರ ವಿಭಾಗದಲ್ಲಿ ಮಂಡ್ಯ ಜಿಲ್ಲಾ ತಂಡ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ದ.ಕ. ತಂಡದ ತೀರ್ಥೇಶ್ (ಉತ್ತಮ ಅಟ್ಯಾಕರ್), ಮಂಡ್ಯ ತಂಡದ ಮಹೇಶ್ (ಉತ್ತಮ ಕ್ಯಾಚರ್) ಹಾಗೂ ಯಶವಂತ (ಪಂದ್ಯಶ್ರೇಷ್ಠ) ವೈಯಕ್ತಿಕ ಪ್ರಶಸ್ತಿ ಪಡೆದರು.
14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲಾ ತಂಡದ ಪ್ರಾಪ್ತಿ ಎಂ. (ಉತ್ತಮ ಅಟ್ಯಾಕರ್), ದ.ಕ. ತಂಡದ ಸನ್ನಿಧಿ (ಉತ್ತಮ ಕ್ಯಾಚರ್) ಹಾಗೂ ಜುಯಾನ್ನ ಕುಟಿನ್ಹಾ (ಪಂದ್ಯಶ್ರೇಷ್ಠ) ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರು.
17 ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಚಿಕ್ಕಮಗಳೂರು ತಂಡ ಪ್ರಥಮ, ದಕ್ಷಿಣ ಕನ್ನಡ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ದ.ಕ.ಜಿಲ್ಲಾ ತಂಡದ ಅಭಿಷೇಕ್ (ಉತ್ತಮ ಅಟ್ಯಾಕರ್), ಚಿಕ್ಕಮಗಳೂರು ತಂಡದ ದರ್ಶನ್ ಲಕ್ಷಣ್ ಪಡಸಲಗಿ (ಉತ್ತಮ ಕ್ಯಾಚರ್) ಹಾಗೂ ಲಾಲ ಉಸ್ಮಾನ್ (ಪಂದ್ಯ ಶ್ರೇಷ್ಠ ಆಟಗಾರ) ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
17 ವರ್ಷ ವಯೋಮನದ ಬಾಲಕಿಯರ ವಿಭಾಗದಲ್ಲಿ ಆತಿಥೇಯ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿಯರ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರಥಮ, ಉಡುಪಿ ಜಿಲ್ಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದ.ಕ. ಜಿಲ್ಲಾ ತಂಡದ ರಮ್ಯ ರಾಮಕುಂಜ (ಉತ್ತಮ ಅಟ್ಯಾಕರ್), ಧನ್ವಿ ರಾಮಕುಂಜ (ಪಂದ್ಯಶ್ರೇಷ್ಠ), ಉಡುಪಿ ಜಿಲ್ಲಾ ತಂಡದ ಮಣಿಶ್ರೀ (ಉತ್ತಮ ಕ್ಯಾಚರ್) ಪ್ರಶಸ್ತಿ ಪಡೆದುಕೊಂಡರು. ದಿವಾಕರ ಉಪ್ಪಳ, ವಿಜಯ್ ಅತ್ತಾಜೆ ಕಬಡ್ಡಿ ಪಂದ್ಯಾಟದ ನಿರೂಪಕರಾಗಿದ್ದರು.
ಸಮಾರೋಪ ಸಮಾರಂಭ: ರಾಮಕುಂಜ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಿಸಲಾಯಿತು. ನಿವೃತ್ತ ಯುವಜನ ಸೇವಾ ಕ್ರೀಡಾಧಿಕಾರಿ, ಕಬಡ್ಡಿ ತರಬೇತುದಾರ ಮಾಧವ ಬಿ.ಕೆ., ಕಡಬ ತಾಲ್ಲೂಕು ಅಮೆಚೂರ್ ಕಬಡ್ಡಿ ಸಂಸ್ಥೆ ಅಧ್ಯಕ್ಷ ಯಾಕೂಬ್ ಹೊಸ್ಮಠ, ಕಬಡ್ಡಿ ಆಯೋಜನಾ ಸಮಿತಿ ಉಪಾಧ್ಯಕ್ಷ ಕೆ.ಸೇಸಪ್ಪ ರೈ, ಚಿಕ್ಕಮಗಳೂರು ತಂಡದ ಕೋಚ್ ಗೋಪಿ ಮಾತನಾಡಿದರು.
ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ತೀರ್ಪುಗಾರ ಮಂಡಳಿ ಅಧ್ಯಕ್ಷ ಶಿವರಾಮ ಏನೆಕಲ್ಲು, ಕಬಡ್ಡಿ ಆಯೋಜನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಕೇಶವ ಅಮೈ, ಉಪಾಧ್ಯಕ್ಷ ಟಿ.ನಾರಾಯಣ ಭಟ್, ಉದ್ಯಮಿ ಎಂ.ಡಿ. ಚಂದ್ರಶೇಖರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಕೆಎಸ್ಎಸ್ಎಸ್ ನೆಟ್ಟಣ ಘಟಕದ ಅಧ್ಯಕ್ಷ ಸುರೇಶ್, ಉದ್ಯಮಿ ಶಿವಪ್ರಸಾದ್ ಇಜ್ಜಾವು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ತ್ಯಾಗಂ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ಭರತ್ ಸುವರ್ಣ ಭಾಗವಹಿಸಿದ್ದರು.
ಕಡಬ ತಾಲ್ಲೂಕು ಅಮೆಚೂರು ಕಬಡ್ಡಿ ತೀರ್ಪುಗಾರ ಮಂಡಳಿ ಅಧ್ಯಕ್ಷ ದಿನೇಶ್ ನೆಟ್ಟಣ ಸ್ವಾಗತಿಸಿ, ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.