ADVERTISEMENT

ಅಂಗಾಂಗ ದಾನ | ಮಹಿಳೆಯರೇ ಹೆಚ್ಚು: ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:04 IST
Last Updated 2 ಆಗಸ್ಟ್ 2025, 7:04 IST
 ದಿನೇಶ್ ಗುಂಡೂರಾವ್
 ದಿನೇಶ್ ಗುಂಡೂರಾವ್   

ಮಂಗಳೂರು/ಉಳ್ಳಾಲ: ‘ಅಂಗಾಂಗ ದಾನ ಪ್ರಕ್ರಿಯೆ ಸರಳೀಕರಿಸಲು ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಅಂಗಾಂಗ ದಾನ ಸ್ವೀಕರಣಾ ಕೇಂದ್ರ ತೆರೆದು ಸೌಲಭ್ಯ ಕಲ್ಪಿಸಲಾಗುವುದು’ ಎಂದು ಆರೋಗ್ಯ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅಂಗಾಂಗ ದಾನ ಮತ್ತು ಕಸಿಗೆ ಸಂಬಂಧಿಸಿದ ರಕ್ತ ಪರೀಕ್ಷೆಗಾಗಿ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಂಗಳೂರು ವೈದ್ಯಕೀಯ ಸೇವೆಗಳ ಟ್ರಸ್ಟ್ (ಬಿಎಂಎಸ್‌ಟಿ) ಸಹಕಾರದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುವುದು. ಪ್ರಸ್ತುತ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಮೈಸೂರು ಮತ್ತು ಶಿವಮೊಗ್ಗದಲ್ಲಿಯೂ ಇದೇ ರೀತಿಯ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 24X7 ಸೇವೆ ದೊರೆಯುವ ನಿಟ್ಟಿನಲ್ಲಿ ತಲಾ ಇಬ್ಬರು ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಒಬ್ಬರು ಅಥವಾ ಇಬ್ಬರು ಮಕ್ಕಳ ತಜ್ಞರು ಕಡ್ಡಾಯವಾಗಿ ಇರುವಂತೆ ಮಾಡಲು ಕ್ರಮ ವಹಿಸಲಾಗುವುದು. ಪ್ರಸ್ತುತ ತಾಲ್ಲೂಕು ಆಸ್ಪತ್ರೆಗಳಲ್ಲಿ ಈ ಮೂರು ತಜ್ಞ ವೈದ್ಯರ ತಲಾ ಒಂದು ಹುದ್ದೆ ಮಂಜೂರು ಇದೆ’ ಎಂದರು.

ADVERTISEMENT

ಆರೋಗ್ಯ ಇಲಾಖೆಯ 3ಎ ನಿಯಮದ ಪ್ರಕಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಯಾವುದೇ ಗಂಭೀರ ಕಾಯಿಲೆಗೆ (ಸುಮಾರು 300 ರೀತಿ ರೋಗಗಳು) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯ ಮೇಲಧಿಕಾರಿಗಳ ಶಿಫಾರಸು ಪತ್ರ ಅಗತ್ಯವಿರುತ್ತದೆ. ಇನ್ನು ಮುಂದೆ ಅಗತ್ಯ ಸಂದರ್ಭಗಳಲ್ಲಿ ಕೆಳಹಂತದ ಶಿಫಾರಸು ಪತ್ರದೊಂದಿಗೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗಲು ಅವಕಾಶ ಕಲ್ಪಿಸುವ ಸಂಬಂಧ ಮೊದಲ ಹಂತದ ಚರ್ಚೆ ನಡೆದಿದೆ. ಇದರಿಂದ ರೋಗಿಗಳಿಗೆ ಎರಡು ಕಡೆ ಅಲೆದಾಟ ತಪ್ಪಿ, ಶೀಘ್ರ ಚಿಕಿತ್ಸೆ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.