ಬಂಟ್ವಾಳ: ಬಿ.ಸಿ.ರೋಡು ಸಮೀಪದ ಕೈಕಂಬದಲ್ಲಿನ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ನಾಲ್ಕನೇ ಮಹಡಿ ಮೇಲೆ ಹೂ, ಹಣ್ಣು ಗಿಡಗಳು ನಳನಳಿಸುತ್ತಿದ್ದು, ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಡಾ.ಗೋವರ್ಧನ ರಾವ್ ಅವರ ತಾರಸಿ ಮೇಲೆ ಸಾವಯವ ಕೃಷಿ ಗಮನ ಸೆಳೆದಿದೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗದಿಂದ ನಿವೃತ್ತರಾಗಿ 2019ರಲ್ಲಿ ಊರಿಗೆ ಮರಳಿದ್ದ ಅವರು, ರಾಷ್ಟ್ರೀಯ ಹೆದ್ದಾರಿ ಬಳಿ ವಾಣಿಜ್ಯಸಂಕೀರ್ಣನಿರ್ಮಿಸಿದ್ದರು.
ಸಮಯ ಕಳೆಯಲು ತಾರಸಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದು, ಈಗ ಹವ್ಯಾಸವಾಗಿದೆ. 4ಸಾವಿರ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಸಂಕೀರ್ಣದ ತಾರಸಿಯಲ್ಲಿ ವಿವಿಧ ಬಗೆಯ ಹೂಗಳು ನಳನಳಿಸುತ್ತಿವೆ. ಜೊತೆಗೆ ಬೆಂಡೆ, ತೊಂಡೆ, ಹೀರೆ, ಸೋರೆ, ಕುಂಬಳ, ಬದನೆ ಕಾಯಿಗಳು, ಅಲಸಂಡೆ, ಬಸಳೆ ಇತ್ಯಾದಿ ತರಕಾರಿಗಳೂ ಇವೆ. ಚಿಕ್ಕು, ಪೇರಳೆ, ಮಾವು, ಸೇಬು, ಕಲ್ಲಂಗಡಿ, ಚೆರಿ, ಸೀತಾಫಲ, ಲೊಂಬೆ, ಜಂಬು ನೇರಳೆ ಹೀಗೆ ವಿವಿಧ ತಳಿಯ ಹಣ್ಣುಗಳು ಸಿಹಿ ನೀಡುತ್ತಿವೆ.
ತಾಪ ನಿಯಂತ್ರಣಕ್ಕಾಗಿ ಹಸಿರು ಬಲೆ ಅಳವಡಿಸಲಾಗಿದೆ. ಸ್ಥಳೀಯ ಶಾಲಾ ಮಕ್ಕಳು ತಾರಸಿ ಕೃಷಿ ವೀಕ್ಷಿಸಿ ಸ್ಫೂರ್ತಿ ಪಡೆದುಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.