ADVERTISEMENT

ಬಜಪೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 13:48 IST
Last Updated 16 ಜುಲೈ 2022, 13:48 IST
ಪ್ರಕಾಶ್‌
ಪ್ರಕಾಶ್‌   

ಬಜಪೆ: ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಜಪೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಪ್ರಕಾಶ್ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಸಂದೇಶ್ ಪಿ.ಜಿ. ಅವರ ವರ್ಗಾವಣೆಯಿಂದ ಈ ಸ್ಥಾನ ತೆರವಾಗಿತ್ತು.

ರಾಷ್ಟ್ರಮಟ್ಟದ ವಾಲಿಬಾಲ್ ಪಟುವಾಗಿರುವ ಪ್ರಕಾಶ್ ಅವರು ಪ್ರಶಸ್ತಿ ವಿಜೇತ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕ್ರೀಡಾ ಸಾಧನೆಯಿಂದಲೇ ರೈಲ್ವೆ ಇಲಾಖೆಯನ್ನು ಸೇರಿದ್ದರು. ಬಳಿಕ ಸೇನೆಯಲ್ಲಿ ಆರು ತಿಂಗಳು ಸೇವೆಸಲ್ಲಿಸಿ, ಬಳಿಕ ಪೊಲೀಸ್ ಇಲಾಖೆಗೆ ನೇಮಕಾತಿ ಪಡೆದುಕೊಂಡರು.

ಪ್ರೊಬೆಷನರಿ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು, ಮೊದಲ ಬಾರಿಗೆ ಕಡೂರು ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸಿದರು. ಮೆಸ್ಕಾಂ, ಉಳ್ಳಾಲ ಠಾಣೆ, ಮಂಗಳೂರು ಟ್ರಾಫಿಕ್, ಕಾರವಾರ ಹಾಗೂ ಕುದುರೆಮುಖ ಸೇರಿದಂತೆ ಹನ್ನೊಂದು ವರ್ಷ ವಿವಿಧೆಡೆ ಕರ್ತವ್ಯ ನಿರ್ವಹಿಸಿ ಪದೋನ್ನತಿ ಪಡೆದುಕೊಂಡರು. ಬಳಿಕ ರಾಮನಗರ ಎಸಿಬಿಯಲ್ಲಿಯೂ 3 ವರ್ಷ ಕರ್ತವ್ಯ ನಿರ್ವಹಿಸಿದ್ದರು. ನಂತರ ಸಿದ್ಧಾಪುರದಲ್ಲಿ ಸೇವೆ ಸಲ್ಲಿಸಿ ತಮ್ಮ ಹುಟ್ಟೂರಿನ ಕಾಪುನಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದರು.

ADVERTISEMENT

ಕಾಪು ತಾಲ್ಲೂಕಿನ ಮುದರಂಗಡಿ ಸಮೀಪದ ಹಲಸಿನಕಟ್ಟೆಯಲ್ಲಿ ಹುಟ್ಟಿ ಬೆಳೆದ ಪ್ರಕಾಶ್ ಅವರು ಹಲಸಿನಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮುದರಂಗಡಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಶಿರ್ವದಲ್ಲಿ ಪಿಯು, ಮುಲ್ಕಿಯ ವಿಜಯ ಕಾಲೇಜ್‌ನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ.

‘ಬಜಪೆ ಸುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಹದಿಹರೆಯದಲ್ಲಿ ಬಜಪೆಯ ದೇವದಾರು ಮರದ ಕೆಳಗೆ ವಾಲಿಬಾಲ್ ಪಂದ್ಯ ಆಡಲು ಬರುತ್ತಿದ್ದೆ. ಈಗ ಇದೇ ಬಜಪೆ ಠಾಣೆಗೆ ಇನ್‌ಸ್ಪೆಕ್ಟರ್‌ ಆಗಿ ಬಂದಿರುವುದು ಹರ್ಷ ತಂದಿದೆ’ ಎಂದು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.