ಅನುಮತಿ ಪಡೆಯದೆ ಕಡಬ ಪೊಲೀಸ್ ಠಾಣೆ ಬಳಿ ಪ್ರತಿಭಟನೆ: 15 ಜನರ ವಿರುದ್ಧ ಎಫ್ಐಆರ್
ಕಡಬ (ಉಪ್ಪಿನಂಗಡಿ): ಅನುಮತಿ ಪಡೆಯದೆಯೇ ಕಡಬ ಠಾಣೆಯ ಬಳಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿವಿಧ ಸಂಘಟನೆಗಳ ಪ್ರಮುಖರು ಅಪರಾಧದ ಹಿನ್ನೆಲೆ ಹೊಂದಿದ್ದರೆ, ಅದನ್ನು ಪರಿಶೀಲಿಸುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದರು.
ಶನಿವಾರ ಹಾಗೂ ಭಾನುವಾರ ಕೆಲವು ಸ್ಥಳೀಯ ವ್ಯಕ್ತಿಗಳ ಮನೆಗೆ ಪೊಲೀಸರು ಭೇಟಿ ನೀಡಿ ವಿವರ ಕಲೆಹಾಕಿದ್ದರು. ಹಿಂದುತ್ವವಾದಿ ಸಂಘಟನೆಗಳ ಪ್ರಮುಖರನ್ನು ಒಳಗೊಂಡ ಸ್ಥಳೀಯರು ಗುಂಪುಕಟ್ಟಿಕೊಂಡು ಕಡಬ ಠಾಣೆಗೆ ಭಾನುವಾರ ರಾತ್ರಿ ತೆರಳಿ, ‘ನೀವು ನಮ್ಮನ್ನು ಹುಡುಕಿಕೊಂಡು ಮನೆಗೆ ಬರುವುದು ಬೇಡ. ಏನು ವಿವರ ಬೇಕೋ ಇಲ್ಲೇ ಪಡೆದುಕೊಳ್ಳಿ’ ಎಂದು ಗಲಾಟೆ ಮಾಡಿದ್ದರು.
‘ಕೆಲವು ಸ್ಥಳೀಯರು ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ. ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ., ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್, ನೂಜಿಬಾಳ್ತಿಲ, ರಾಧಾಕೃಷ್ಣ, ಕೆ., ಜಯಂತ್ ಮತ್ತು ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189(2) (ಅಕ್ರಮ ಕೂಟ ರಚನೆ), ಹಾಗೂ ಸೆಕ್ಷನ್ 190 ರ (ಅಕ್ರಮ ಕೂಟ ರಚಿಸಿ ಕಾನೂನು ಬಾಹಿರ ಕೃತ್ಯ ನಡೆಸುವುದು) ಅಡಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.