ADVERTISEMENT

ಪುತ್ತೂರುದ ಪಿಲಿಗೊಬ್ಬು, ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:27 IST
Last Updated 26 ಸೆಪ್ಟೆಂಬರ್ 2025, 5:27 IST
ದಸರಾ ಆಹಾರ ಮೇಳ ( ಸಂಗ್ರಹ ಚಿತ್ರ)
ದಸರಾ ಆಹಾರ ಮೇಳ ( ಸಂಗ್ರಹ ಚಿತ್ರ)   

ಪುತ್ತೂರು: ವಿಜಯ ಸಾಮ್ರಾಟ್ ಸಂಸ್ಥೆಯ ಸಾರಥ್ಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಸೆ.27 ಮತ್ತು 28ರಂದು ಪುತ್ತೂರುದ ಪಿಲಿಗೊಬ್ಬು, ಫುಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ’ ಎಂದು ವಿಜಯಸಾಮ್ರಾಟ್ ಚಾರಿಟಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದರು.

27ರಂದು ಸಂಜೆ 4 ಗಂಟೆಗೆ ಆಹಾರಮೇಳವನ್ನು ಮುಳಿಯ ಜುವೆಲ್ಲರ್ಸ್‌ನ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸುವರು. ಆಹಾರ ಮಳಿಗೆಗೆ ಸುದರ್ಶನ ಭಟ್ ಬೆದ್ರಾಡಿ ಚಾಲನೆ ನೀಡುವರು.ಸೆ.28ರಂದು ಬೆಳಿಗ್ಗೆ 10.30ಕ್ಕೆ ಪಿಲಿಗೊಬ್ಬು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಜಿಎಲ್ ಜುವೆಲ್ಲರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಉದ್ಘಾಟಿಸುವರು. ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಪಿಲಿಗೊಬ್ಬು ವೇದಿಕೆಯನ್ನು ಉದ್ಘಾಟಿಸುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ,ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಕಿಶೋರ್‌ಕುಮಾರ್ ಬೊಟ್ಯಾಡಿ, ಶಾಸಕ ಅಶೋಕ್‌ಕುಮಾರ್ ರೈ, ರಾಜ್ಯ ಸಹಕಾರ ಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಮುಖಂಡ ನಳಿನ್‌ಕುಮಾರ್ ಕಟೀಲು ಭಾಗವಹಿಸುವರು. ವಿಶೇಷ ಆಕರ್ಷಣೆಯಾಗಿ ಬಿಗ್‌ಬಾಸ್ ಖ್ಯಾತಿಯ ತ್ರಿವಿಕ್ರಮ್, ಧನರಾಜ್ ಆಚಾರ್ಯ, ಕಿರುತೆರೆ ನಟಿ ವೈಷ್ಣವಿ, ನಟ ಹಾಗೂ ನಿರ್ದೇಶಕ ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ ಸೇರಿದಂತೆ ಸಿನಿಮಾರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವರು ಎಂದರು.

ADVERTISEMENT

₹ 3 ಲಕ್ಷ ಬಹುಮಾನ:

ಆಹ್ವಾನಿತ 8 ಪ್ರಖ್ಯಾತ ಹುಲಿವೇಷ ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನಿಗೆ ₹ 3 ಲಕ್ಷ, ದ್ವಿತೀಯ ಸ್ಥಾನಿಗೆ ₹ 2 ಲಕ್ಷ ಹಾಗೂ ತೃತೀಯ ಸ್ಥಾನಿಗೆ ₹ 1 ಲಕ್ಷ ಬಹುಮಾನ ನೀಡಲಾಗುವುದು. ಪಂದ್ಯಶ್ರೇಷ್ಠ ಹುಲಿಗೆ ₹10 ಸಾವಿರ ನಗದು ಹಾಗೂ ಎಲ್ಇಡಿ ಟಿವಿ, ಪಂದ್ಯಶ್ರೇಷ್ಠ ಕಪ್ಪು ಹುಲಿಗೆ ₹ 10ಸಾವಿರ ಬಹುಮಾನ ನೀಡಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಶಿಸ್ತಿನ ತಂಡ ಪ್ರಶಸ್ತಿ, ಗುಂಪುಪ್ರಶಸ್ತಿ, ಉತ್ತಮ ತಾಸೆ, ಬಣ್ಣಗಾರಿಕೆ, ಉತ್ತಮ ಧರಣಿಮಂಡಲ ಕುಣಿತ, ಮರಿ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದು ಮತ್ತಿತರ ವೈಯುಕ್ತಿಕ ವಿಭಾಗಗಳಲ್ಲಿ ವಿಶೇಷ ಬಹುಮಾನ ನೀಡಲಾಗುವುದು. ಪ್ರತೀ ತಂಡಕ್ಕೆ ₹ 50 ಸಾವಿರ ಗೌರವ ಸಂಭಾವನೆ ನೀಡಲಾಗುವುದು. ಪ್ರತಿ ತಂಡದಲ್ಲಿ 15 ಮಂದಿ ಇರಬೇಕು. ಕುಣಿತಕ್ಕೆ 23 ನಿಮಿಷಗಳ ಕಾಲಾವಕಾಶ ಇದೆ ಎಂದು ಅವರು ತಿಳಿಸಿದರು.

ವಿಜಯ ಸಾಮ್ರಾಟ್ ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡು, ಪುತ್ತೂರಿನ ಅಧ್ಯಕ್ಷ ಉಮೇಶ್ ನಾಯಕ್, ಉಪಾಧ್ಯಕ್ಷ ಶಂಕರ್ ಭಟ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೋರೇಲು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.