
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಾಜ್ಯದ ಮೂರನೇ ಅತಿ ದೊಡ್ಡ ರಾಷ್ಟ್ರ ಧ್ವಜಸ್ತಂಭದಲ್ಲಿ ಭಾನುವಾರ ಸಂಜೆ ಪರೀಕ್ಷಾರ್ಥವಾಗಿ ಕೆಲ ಕಾಲ ತ್ರಿವರ್ಣ ಧ್ವಜ ಹಾರಾಡಿತು.
80 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಧ್ವಜಕಂಬ ಅಳವಡಿಕೆ ಕಾರ್ಯ ಭಾನುವಾರ ಬೆಳಿಗ್ಗೆ ಆರಂಭಗೊಂಡಿತು. ಬೃಹತ್ ಕ್ರೇನ್ ಮೂಲಕ ಧ್ವಜಸ್ತಂಭವನ್ನು ಅಳವಡಿಸಿ ಸಂಜೆ ಹೊತ್ತಿಗೆ ಕೆಲ ಕಾಲ ಪರೀಕ್ಷಾರ್ಥವಾಗಿ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹಾರಿಸಿ,ಬಳಿಕ ಇಳಿಸಲಾಯಿತು. ಧ್ವಜ ಸ್ತಂಭ ಅಳವಡಿಕೆಯ ವೇಳೆ ಶಾಸಕ ಅಶೋಕ್ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು. ಈ ಬೃಹತ್ ಧ್ವಜ ಸ್ತಂಭ ವನ್ನು ಅಳವಡಿಸುವ ವೇಳೆ ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈ, ಪುತ್ತೂರಿನಲ್ಲಿ ಅತ್ಯಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬುದು ನಮ್ಮ ಕನಸಾಗಿತ್ತು. ಪುತ್ತೂರಿ ನಲ್ಲಿ ದೇಶ ಪ್ರೇಮ ಏನು ಎಂಬುವುದನ್ನು ತೋರಿಸುತ್ತೇವೆ ಎಂದು 6 ತಿಂಗಳ ಹಿಂದೆಯೇ ಹೇಳಿದ್ದೆ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ಎತ್ತರದಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಯಾವುದೇ ತಾಲ್ಲೂಕು ರಾಜ್ಯದಲ್ಲಿ ಇಲ್ಲ. ತಾಲ್ಲೂಕು ಮಟ್ಟದಲ್ಲಿ ರಾಜ್ಯದ ಅತ್ಯಂತ ಎತ್ತರದ 3ನೇ ರಾಷ್ಟ್ರಧ್ವಜ ಸ್ತಂಭ ಇರುವುದು ಪುತ್ತೂರಿನಲ್ಲಿ ಎಂದು ಹೇಳಲು ಇಚ್ಛಿಸುವೆ ಎಂದರು.
ವಾರದೊಳಗೆ ಲೈಟಿಂಗ್ ವ್ಯವಸ್ಥೆ ಮಾಡಿ ರಾಷ್ಟ್ರಧ್ವಜ ಹಾರಿಸುವ ಕೆಲಸ ಮಾಡಲಾಗುವುದು. 2400 ಚದರ ಅಡಿ ಅಗಲದ ರಾಷ್ಟ್ರಧ್ವಜ ಹಾರಾಡ ಲಿದೆ. ಒಂದು ಧ್ವಜಕ್ಕೆ ₹60 ಸಾವಿರ ವೆಚ್ಚವಿದ್ದು, ವರ್ಷಕ್ಕೆ 3 ಬಾರಿ ಧ್ವಜವನ್ನು ಬದಲಾಯಿಸಬೇಕಾಗುತ್ತದೆ. ಮೈಕಲ್ಲಿ ಭಾಷಣ ಮಾಡಿದ ಮಾತ್ರಕ್ಕೆ ದೇಶ ಪ್ರೇಮ ಬರುವುದಿಲ್ಲ. ಇಂತಹ ವ್ಯವಸ್ಥೆಗಳನ್ನು ಮಾಡಿದರೆ ಮಾತ್ರ ದೇಶ ಪ್ರೇಮ ಬೆಳೆಸಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.