ಮಂಗಳೂರು: ಕರಾವಳಿಯ ಹಲವೆಡೆ ಬುಧವಾರ ಸಂಜೆಯಿಂದ ಮಳೆ ಬಿರುಸಾಗಿದ್ದು, ಗುರುವಾರವೂ ಮುಂದುವರಿದಿದೆ. ಎರಡು ದಿನ ಬಿಡುವು ಪಡೆದಿದ್ದ ಮಳೆ, ಮತ್ತೆ ಚುರುಕಾಗಿದೆ.
ಬುಧವಾರ ಸಂಜೆಯಿಂದ ಬಿರುಸಿನ ಮಳೆ ಸುರಿದಿದ್ದು, ನಗರದಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿತ್ತು. ರಾತ್ರಿ ಪೂರ್ತಿ ಸುರಿದ ಮಳೆ, ಗುರುವಾರವೂ ಧಾರಾಕಾರವಾಗಿ ಸುರಿಯಿತು.
ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿ 34.5 ಮಿ.ಮೀ, ಸುಳ್ಯ ತಾಲ್ಲೂಕಿನಲ್ಲಿ 31.3 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 23.4 ಮಿ.ಮೀ ಮಳೆ ದಾಖಲಾಗಿದೆ. ಘಟ್ಟ ಪ್ರದೇಶ ಹಾಗೂ ಬೆಳ್ತಂಗಡಿ, ಸುಳ್ಯ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನೇತ್ರಾವತಿ, ಕುಮಾರಧಾರಾ, ಗುಂಡ್ಯ ನದಿಗಳಲ್ಲಿನ ನೀರಿನ ಹರಿವು ಸ್ವಲ್ಪ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲೂ ಬಿರುಸಿನ ಮಳೆಯಾಗಿದೆ.
ಬೀದರ್ ವರದಿ: ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆ ಸುರಿಯಿತು. ಬೀದರ್ನಲ್ಲಿ ಸಂಜೆ ವೇಳೆಗೆ ಅರ್ಧಗಂಟೆ ಜೋರಾಗಿ ಮಳೆ ಸುರಿದರೆ ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ, ಭಾಲ್ಕಿಯಲ್ಲಿ ಸಾಧಾರಣ ಮಳೆಯಾಯಿತು.
ಕಲಬುರ್ಗಿ ನಗರ, ಮಳಖೇಡ, ಕಾಳಗಿಯಲ್ಲಿ ಉತ್ತಮ ಮಳೆಯಾಯಿತು. ಕೊಪ್ಪಳ, ಗಂಗಾವತಿಯಲ್ಲಿ ತುಂತುರು ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.