ಮಂಗಳೂರು: ಮಂಗಳೂರು ಹೊರವಲಯದ ಕಲ್ಲಾಪುವಿನ ಹಣ್ಣು– ತರಕಾರಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಾಗಿರುವ ನೌಷಾದ್ ಅಹ್ಮದ್ ನಸುಕಿನಲ್ಲಿ ಬಸ್ಗಾಗಿ ಕಾಯುತ್ತಾ ಕಣ್ಣೂರು ಬಸ್ನಿಲ್ದಾಣದ ಬಳಿ ನಿಂತಿದ್ದರು. ಆಗ ಅಲ್ಲಿಗೆ ಬಂದ ಮೂವರು ಅವರಲ್ಲಿ ‘ಮಂಗಳೂರಿಗೆ ಬಸ್ ಇದೆಯಾ’ ಎಂದು ವಿಚಾರಿಸಿದರು. ಅವರು ಉತ್ತರಿಸಲು ಮುಂದಾಗುತ್ತಿದ್ದಂತೆಯೇ ಡ್ಯಾಗರ್ನಿಂದ ಹೊಟ್ಟೆಗೆ ಇರಿದಾಗ, ನೌಷಾದ್ ಕೈ ಅಡ್ಡ ಹಿಡಿದು ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರು ತಿರುಗಿದಾಗ ಬೆನ್ನಿಗೆ ಡ್ಯಾಗರ್ನಿಂದ ಇರಿದರು. ಅದನ್ನು ತಿರುಗಿಸುವಾಗ ಡ್ಯಾಗರ್ ತುಂಡಾಗಿದ್ದು, ಅದರ ಸುಮಾರು ನಾಲ್ಕು ಇಂಚು ಉದ್ದದ ಭಾಗ ಬೆನ್ನಿನಲ್ಲಿ ಸಿಲುಕಿತ್ತು’ ಎಂದು ಅವರ ಸೋದರ ಜುನೈದ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಸ್ತ್ರಚಕಿತ್ಸೆ ಬಳಿಕ ಡ್ಯಾಗರ್ ತುಂಡನ್ನು ಹೊರತೆಗೆಯಲಾಗಿದೆ. ನೌಷಾದ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜುನೈದ್ ತಿಳಿಸಿದ್ದಾರೆ. ನೌಷಾದ್ ಅವರಿಗೆ ಪತ್ನಿ, ನಾಲ್ಕು ವರ್ಷದ ಮಗಳು, ಆರು ತಿಂಗಳ ಗಂಡು ಮಗು ಇದೆ. ಅವರು ಪತ್ನಿ ಮಕ್ಕಳು, ತಂದೆ ತಾಯಿ, ಇಬ್ಬರು ಸೋದರರ ಜೊತೆ ಕಣ್ಣೂರು ಮಸೀದಿ ಬಳಿ ನೆಲಸಿದ್ದರು.
ಉಳ್ಳಾಲ ಸಮೀಪದ ತೊಕ್ಕೊಟ್ಟು ಮಾಯ ಬಾರ್ ಎದುರುಗಡೆ ಶುಕ್ರವಾರ ತಡರಾತ್ರಿ ಅಲೇಕಳ ನಿವಾಸಿ ಫೈಝಲ್ ಎಂಬುವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಲಾಗಿದೆ. ಅವರು ಸೋಮೇಶ್ವರದಲ್ಲಿರುವ ಪತ್ನಿಯ ಮನೆಯಿಂದ ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರುಕಟ್ಟೆಗೆ ಬೈಕ್ನಲ್ಲಿ ತೆರಳುತ್ತಿರುವಾಗ ಕೆಲವರು ತಲವಾರು ಬೀಸಿದ್ದು, ಬೆನ್ನಿನಲ್ಲಿ ಗಾಯಗಳಾಗಿವೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕುಂಟಿಕಾನದ ಬಳಿ ಯುವಕನೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.
ಉಡುಪಿಯ ಹಿರಿಯಡ್ಕ ವ್ಯಾಪ್ತಿಯ ಶೇಡಿಗುಡ್ಡೆ ಎಂಬಲ್ಲಿ ಆಟೊ ಚಾಲಕ ಆತ್ರಾಡಿಯ ಅಬೂಬಕ್ಕರ್ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
‘ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.