
ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಪ್ರಜಾವಾಣಿ ಹಾಗೂ ವಿಟ್ಲ ಪೊಲೀಸ್ ಠಾಣೆ ಸಹಯೋಗದಲ್ಲಿ ಮಂಗಳವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಟ್ಲ ಪೊಲೀಸ್ ಠಾಣೆ ಪಿಎಸ್ಐ ರಾಮಕೃಷ್ಣ ಮಾತನಾಡಿ, ಈಗಾಗಲೇ ಎಲ್ಲಿ ನೋಡಿದರೂ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದರಲ್ಲಿ ಶೇ 50ರಿಂದ 60 ಪ್ರಕರಣಗಳು ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗಿದೆ. ಮಕ್ಕಳು ಸಂಚಾರ ನಿಯಮ ತಿಳಿದು ತಮ್ಮ ಪೋಷಕರಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಒಬ್ಬ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಅಥವಾ ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಅಪಘಾತವಾಗಿ ನಿಯಮ ಉಲ್ಲಂಘನೆ ಮಾಡದೆ ಸರಿ ದಾರಿಯಲ್ಲಿ ಸಂಚರಿಸುವವನಿಗೆ ತೊಂದರೆ ಉಂಟಾಗುತ್ತದೆ. ಪ್ರತಿಯೊಬ್ಬರು ಸಂಚಾರ ನಿಯಮವನ್ನು ಪಾಲಿಸಬೇಕು. ಇದು ಸರಿಯಾಗಿ ಪಾಲನೆ ಮಾಡಿದಾಗ ಸುಖಕರ ಜೀವನ ಸಾಗಿಸಲು ಸಾಧ್ಯ. ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದರೆ ಜೀವಕ್ಕೆ ಕುತ್ತು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಸಾಮಾನ್ಯವಾಗಿದ್ದು, ಇದು ಅಪರಾಧವಾಗಿದೆ. ಇದರ ಬಗ್ಗೆ ಇಲಾಖೆ ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದರು.
ಪ್ರಾಂಶುಪಾಲ ಲಿಬಿನ್ ಝೇವಿಯರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ನಿರ್ದೇಶಕ ನೌಶೀನ್ ಬದ್ರಿಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶಾಲೆಯ ನಿರ್ದೇಶಕ ನೌಶೀನ್ ಬದ್ರಿಯಾ, ಪ್ರಜಾವಾಣಿ ಪ್ರಸರಣ ವಿಭಾಗದ ಸುಖೇಶ್ ಮಂಗಳೂರು ಭಾಗವಹಿಸಿದ್ದರು.
ಶಾಲೆಯ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಸ್ವಾಗತಿಸಿದರು. ಪ್ರಜಾವಾಣಿ ಪತ್ರಿಕೆ ವರದಿಗಾರ ಮಹಮ್ಮದ್ ಅಲಿ ವಿಟ್ಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳಾದ ಆಯಿಷಾ ಮರಿಯಂ, ಆಸಿಯಾ ಅರ್ಫಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಫಾತಿಮಾ ಖದೀರಾ ವಂದಿಸಿದರು.
ಸಂಚಾರ ನಿಯಮ ಅಣುಕು ಪ್ರದರ್ಶನ
ಸಂಚಾರ ಸಿಗ್ನಲ್ ಕುರಿತು ಅಣುಕು ಪ್ರದರ್ಶನ ನಡೆಯಿತು. ಶಾಲಾ ವತಿಯಿಂದ ಅಣುಕು ಸಿಗ್ನಲ್ ಬಾಕ್ಸ್ ತಯಾರಿಸಲಾಗಿದ್ದು ಬಟನ್ ಒತ್ತಿದಾಗ ಕೆಂಪು ಹಳದಿ ಹಸಿರು ಬಣ್ಣದ ದೀಪ ಆನ್ ಆಯಿತು. ನಗರ ಹಾಗೂ ಪಟ್ಟಣದ ವೃತ್ತಗಳಲ್ಲಿ ಸಂಚಾರ ನಿಯಮದ ಕೆಂಪು ಹಳದಿ ಹಸಿರು ಬಣ್ಣದ ದೀಪ ಆನ್ ಆದಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.