ಮಂಗಳೂರು: ಮಹಾರಾಜ ಟ್ರೋಫಿ ಕೆಎಸ್ ಸಿಎ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮಂಗಳೂರು ಯುನೈಟೆಡ್ ತಂಡವನ್ನು ಅಗ್ರ ಕ್ರಮಾಂಕದ ಆಟಗಾರ ಆರ್.ಸಮರ್ಥ್ ಮುನ್ನಡೆಸುವರು.
ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಟೂರ್ನಿಯ ಟ್ರೋಫಿ ಅನಾವರಣ ಮಾಡಿ ತಂಡದ ಮಾಲೀಕ ಎಂ.ಬಿ.ಫಾರೂಕ್ ಈ ವಿಷಯ ತಿಳಿಸಿದರು.
ದೇಶಿ ಕ್ರಿಕೆಟ್ ನಲ್ಲಿ ಸಮರ್ಥ್ ಅವರ ಅನುಭವವನ್ನು ಪರಿಗಣಿಸಿ ನಾಯಕತ್ವ ವಹಿಸಲಾಗಿದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಕ್ರಿಕೆಟ್ ಅಂಗಣ ನಿರ್ಮಿಸಲು ಎಲ್ಲ ಪ್ರಯತ್ನ ಮುಂದುವರಿದಿದ್ದು ಕೆಲವೇ ದಿನಗಳಲ್ಲಿ ಜಾಗವನ್ನು ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಂತೋಷ್ ಮೆನನ್, ಮಂಗಳೂರು ವಲಯ ಸಂಚಾಲಕ ಶೇಖರ್ ಶೆಟ್ಟಿ, ಮಂಗಳೂರು ಯುನೈಟೆಡ್ ವ್ಯವಸ್ಥಾಪಕ ಸೈಯದ್ ರಶೀದ್ ಮತ್ತಿತರರು ಇದ್ದರು.
ಮಂಗಳೂರು ಯುನೈಟೆಡ್ ತಂಡ: ಆರ್.ಸಮರ್ಥ್ (ನಾಯಕ), ಅಭಿನವ್ ಮನೋಹರ್, ವೈಶಾಕ್ ವಿಜಯಕುಮಾರ್, ಅಮಿತ್ ವರ್ಮಾ, ವೆಂಕಟೇಶ್ ಎಂ, ಅನೀಶ್ವರ್ ಗೌತಮ್, ಸುಜಯ್ ಸಾತೇರಿ, ರೋಹಿತ್ ಕುಮಾರ್ ಎ.ಸಿ, ಮೆಕ್ನೈಲ್ ನೊರೋನ್ಹ, ಎಚ್.ಎಸ್.ಶರತ್, ಶಶಿಕುಮಾರ್, ನಿಕಿನ್ ಜೋಸ್, ರಘುವೀರ್ ಪವಲೂರು, ಅಮೋಘ್ ಎಸ್, ಚಿನ್ಮಯ್, ಆದಿತ್ಯ ಸೋಮಣ್ಣ, ಯಶೋವರ್ಧನ್ ಪರಾಂತಪ್, ಧೀರಜ್ ಗೌಡ. ಕೋಚ್: ಸ್ಟುವರ್ಟ್ ಬಿನ್ನಿ, ಸಹಾಯಕ ಕೋಚ್: ಎಂ.ವಿ.ಪ್ರಶಾಂತ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.