ಮಂಗಳೂರು: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಸಾಫ್ಟ್ವೇರ್ ಆವೃತ್ತಿ) 2024ರ ಅಂತಿಮ ಸ್ಪರ್ಧೆಯು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಡಿ.11 ಮತ್ತು 12ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಇಂಜಗನೇರಿ ಹೇಳಿದರು.
ಶಿಕ್ಷಣ ಸಚಿವಾಲಯ ಮತ್ತು ಎಐಸಿಟಿಇ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. 2017ರಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ನಡೆಸುತ್ತಿದೆ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಠ್ಯದಾಚೆಗಿನ ಕ್ರಿಯಾಶೀಲತೆ, ಕ್ಲಿಷ್ಟಕರ ಸಮಸ್ಯೆ ಬಗೆಹರಿಸುವ ಕೌಶಲ, ಸಾಮಾಜಿಕ ಸವಾಲುಗಳನ್ನು ಎದುರಿಸುವ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಓರೆಗೆ ಹಚ್ಚುವ ಕಾರ್ಯಕ್ರಮ ಇದಾಗಿದೆ. ಈ ವರ್ಷ ಐದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಈ ಎರಡು ವಿಭಾಗಗಳಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಯು ದೇಶದ 51 ಸ್ಥಳಗಳಲ್ಲಿ ನಡೆಯುತ್ತದೆ. ಕರ್ನಾಟಕದ ಒಂಬತ್ತು ಕೇಂದ್ರಗಳಲ್ಲಿ ಸಹ್ಯಾದ್ರಿ ಕಾಲೇಜು ಒಂದಾಗಿದೆ. 30 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡದಲ್ಲಿ ಆರು ವಿದ್ಯಾರ್ಥಿಗಳಂತೆ ಒಟ್ಟು 180 ಮಂದಿ ಭಾಗವಹಿಸುವರು ಎಂದರು.
ಡಿ.11ರ ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಭಾರತೀಯ ಏರೊಸ್ಪೇಸ್ ವಿಜ್ಞಾನಿ ಬಿ.ಎನ್. ಸುರೇಶ್, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಪಾಲ್ಗೊಳ್ಳುವರು ಎಂದರು.
ಕಾಲೇಜಿನ ದುಡ್ಡೇಲ ಸಾಯಿ ಪ್ರಶಾಂತ್, ಶ್ಯಾಮಲ್ ಕಿಶನ್, ಸುಧೀರ್ ಶೆಟ್ಟಿ, ಮಂಜಪ್ಪ ಸಾರಥಿ, ಅಜಿತ್ ಬಿ.ಎಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.