
ಬೆಳ್ತಂಗಡಿ: ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ 108 ಕಾಯಿ ಗಣಹೋಮ, ಮೂಡಪ್ಪ ಸೇವೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಗುರುವಾರ ನಡೆಯಿತು.
ಬೆಳಿಗ್ಗೆಯಿಂದ ಗಣಹೋಮ ಹಾಗೂ ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 7.30ರಿಂದ ಮೂಡಪ್ಪ ಸೇವೆ, 9 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ವಾಮನ್ ನಾಯಕ್ ಉಪ್ಪಿನಂಗಡಿ ಅವರ ಸಂಯೋಜನೆಯಲ್ಲಿ ವಿವಿಧ ತಂಡಗಳಿಂದ ಭಜನಾ ಸೇವೆ ನಡೆಯಿತು.
ಸೌತಡ್ಕದ ಶಿಶುಮಂದಿರದ ಪುಟಾಣಿಗಳಿಂದ ‘ಚಿಣ್ಣರ ಚಿಲಿಪಿಲಿ’ ಕಾರ್ಯಕ್ರಮ, ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರ ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ ವತಿಯಿಂದ ಭಕ್ತಿ ಸಿಂಚನ, ಸುಗಮ ಸಂಗೀತ, ಗೀತಾಸಂಗಮ, ರಾತ್ರಿ 9.30ರಿಂದ ನರೇಶ್ ಕುಮಾರ್ ಸಸಿಹಿತ್ಲು ನಿರ್ದೇಶನದ ‘ಬ್ರಹ್ಮ ರಕ್ಕಸ’ ತುಳು ನಾಟಕ ಪ್ರದರ್ಶನಗೊಂಡಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ನಾಗಭೂಷಣ ಗುರೂಜಿ ಬೆಂಗಳೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಸ್ಥಾನದ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುದಾಸ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ವಿಶ್ವನಾಥ ಕೆ., ಪ್ರಮೋದ್ ಕುಮಾರ್ ಶೆಟ್ಟಿ, ಗಣೇಶ್ ಕಾಶಿ, ಪ್ರಶಾಂತ್ ಮಚ್ಚಿನ, ಹರಿಶ್ಚಂದ್ರ ಜಿ., ಲೋಕೇಶ್ವರಿ ವಿನಯಚಂದ್ರ, ಸಿನಿ ಗುರುದೇವನ್, ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.