ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಶನಿವಾರ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಸ್ನಾನಘಟ್ಟ, ಕುಮಾರಧಾರಾದ ಪಂಜ ರಸ್ತೆಯ ಸೇತುವೆ ಶನಿವಾರ ಸಂಜೆ ಮುಳುಗಡೆಯಾಗಿದೆ.
ಸಂಜೆ ವೇಳೆಗೆ ಬಟ್ಟೆ ಬದಲಾಯಿಸುವ ಕೊಠಡಿ ಜಲಾವೃತಗೊಂಡಿದ್ದು, ಲಗೇಜ್ ಕೊಠಡಿಯ ಮೆಟ್ಟಿಲು ವರೆಗೆ ನದಿ ನೀರು ಬಂದಿತ್ತು. ಅಲ್ಲಿನ ಅಂಗಡಿಗಳ ವಠಾರಕ್ಕೂ ನೀರು ನುಗ್ಗಿದೆ.
ಸುಬ್ರಹ್ಮಣ್ಯ-ಪಂಜ ಹೆದ್ದಾರಿಯ ಕುಮಾರಧಾರ ಬಳಿಯ ದರ್ಪಣ ತೀರ್ಥ ಹೊಳೆಯ ಸೇತುವೆ ಮುಳುಗಡೆಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಯಿತು. ರಾತ್ರಿ ವೇಳೆಗೆ ನೀರಿನ ಮಟ್ಟ ಮತ್ತಷ್ಟು ಹೆಚ್ಚಳಗೊಂಡ ಕಾರಣ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು.
ಸ್ನಾನಘಟ್ಟ ಸೇತುವೆಯ ಪ್ರದೇಶದಲ್ಲಿ ಸುಬ್ರಹ್ಮಣ್ಯ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ, ಎಸ್ಡಿಆರ್ಎಫ್ ತಂಡ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶನಿವಾರ ದಿನವಿಡೀ ಮಳೆಯಾಗಿದ್ದು, ರಾತ್ರಿಯೂ ಮಳೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.