ಸುಬ್ರಹ್ಮಣ್ಯ: ಭಾರಿ ಮಳೆಯಿಂದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ರೈಲು ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಸಂಜೆ 4.40ರ ವೇಳೆಗೆ ಸಿರಿಬಾಗಿಲು-ಯಡಕುಮಾರಿ, ಯಡಕುಮಾರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ನಡುವಿನ ಕೆಲವೆಡೆ ಮಣ್ಣು ಮತ್ತು ಬಂಡೆಗಳು ಹಳಿಗಳ ಮೇಲೆ ಬಿದ್ದಿದೆ.
ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 07378) ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ಮೂಲಕ ಆರಂಭಿಸಿದೆ. ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು (16586) ಹಾಗೂ ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್(16512), ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು(16596) ಶನಿವಾರ ಕಾಸರಗೋಡು, ಶೊರ್ನೂರ್, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್ಪೇಟೆ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಹೆಚ್ಚುವರಿ ವ್ಯವಸ್ಥಾಪಕ ಕೆ.ಎಸ್.ಜೈನ್ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು ಮತ್ತು ಮರುಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.