ಪತ್ರಿಕಾಗೋಷ್ಠಿಯಲ್ಲಿ ವಿಎಚ್ಪಿ ನಾಯಕರು
– ಪ್ರಜಾವಾಣಿ ಚಿತ್ರ
ಮಂಗಳೂರು: ಬಜಪೆ ಸಮೀಪ ಈಚೆಗೆ ನಡೆಸಿರುವ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಗಮನಿಸಿದಾಗ ಇದರಲ್ಲಿ ನಿಷೇಧಿತ ಪಿಎಫ್ ಐ ಮಾಡ್ಯೂಲ್ ರೀತಿಯಲ್ಲೇ ಕೃತ್ಯ ನಡೆದಿರುವುದು ಗೋಚರಿಸುತ್ತದೆ. ಪ್ರಕರಣವನ್ನು ಎನ್ ಐಎಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಮುಖ ಕೆ.ಟಿ. ಉಲ್ಲಾಸ್ ಒತ್ತಾಯಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಡುದಾರಿಯಲ್ಲಿ ಸುಹಾಸ್ ಕೊಲೆ ನಡೆಸಿದವರು ಯಾವುದೇ ಭಯವಿಲ್ಲದೆ ಆರಾಮವಾಗಿ ಕಾರು ಹತ್ತಿ ಹೊರಟಿರುವುದು ಆ ವೇಳೆ ಸೆರೆಯಾಗಿರುವ ವಿಡಿಯೊದಲ್ಲಿ ದಾಖಲಾಗಿದೆ. ಅವರು ಅಷ್ಟು ವಿಶ್ವಾಸದಲ್ಲಿ ಇರಬೇಕಾದರೆ ಅಲ್ಲಿದ್ದವರು ಅವರ ಜನರೇ ಆಗಿರಬೇಕು ಎಂಬ ಶಂಕೆ ಮೂಡಿದೆ ಎಂದರು.
ಇದು ಕೇವಲ ಪ್ರತೀಕಾರದ ಕೊಲೆ ಅಲ್ಲ, ಈ ಕೊಲೆಗೆ ನಿಷೇಧಿತ ಪಿಎಫ್ ಐ ಸಂಘಟನೆಯಿಂದ ಹಣಕಾಸು ನೆರವು ದೊರೆತಿದೆ. ತನಿಖೆಯಿಂದ ಮಾತ್ರ ಇದು ಹೊರಬರಲು ಸಾಧ್ಯ. ಬಜಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಒಬ್ಬರು ತೊಂದರೆ ಕೊಡುತ್ತಿದ್ದ ಬಗ್ಗೆ ಸುಹಾಸ್ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಸುಹಾಸ್ ತಾಯಿ ಕೂಡ ಈ ವಿಷಯ ಹೇಳಿದ್ದಾರೆ. ಈ ಹೆಡ್ ಕಾನ್ ಸ್ಟೇಬಲ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸುಹಾಸ್ ಯಾವುದೇ ಆಯುಧ ಇಟ್ಟುಕೊಂಡು ಓಡಾಡದಂತೆ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಕೊಲೆಯಾಗುವ ಮೂರು ದಿನ ಮೊದಲಿನಿಂದ ಸುಹಾಸ್ ಬಳಿ ಯಾವುದೇ ಆಯುಧ ಇರಲಿಲ್ಲ ಎಂಬ ಸಂಗತಿ ಕೊಲೆ ಆರೋಪಿಗಳಿಗೆ ತಲುಪಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಬಜಪೆ ಠಾಣೆಯ ಹೆಡ್ ಕಾನ್ ಸ್ಟೇಬಲ್ ಅನ್ನು ತನಿಖೆಗೆ ಒಳಪಡಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.