ಕೊಟ್ಟಿಗೆಹಾರ: ಸಾಮಾನ್ಯರ ಅನುಭವಗಳಿಗೆ ದಿಕ್ಸೂಚಿಯಾಗಿ ಸಾಮಾನ್ಯರ ಮೂಲಕ ಚರಿತ್ರೆಯನ್ನು ಕಟ್ಟಿದವರು ತೇಜಸ್ವಿ ಎಂದು ಲೇಖಕ ನರೇಂದ್ರ ರೈ ದೇರ್ಲ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ತೇಜಸ್ವಿ ನೆನಪು ಕಾರ್ಯಕ್ರಮ ಹಾಗೂ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಕ್ರಮದಲ್ಲಿ ತೇಜಸ್ವಿ ಅರಿವಿನ ಇರವು ಕುರಿತು ಅವರು ಉಪನ್ಯಾಸ ನೀಡಿದರು.
ಪ್ರಕೃತಿಯನ್ನು ಗೆಲ್ಲುವುದೆಂದರೆ ಪ್ರಕೃತಿಯ ಮೇಲೆ ಸವಾರಿ ಮಾಡುವುದಲ್ಲ; ಪ್ರಕೃತಿಗೆ ವಿದೇಯರಾಗಿರುವುದು. ನೆಲ ಜಲದ ಸಂರಕ್ಷಣೆ ಮಹತ್ವವನ್ನು ತಮ್ಮ ಕೃತಿಗಳಲ್ಲಿ ನಿರೂಪಿಸಿದ ಅವರು, ಅತಿರೇಕಕ್ಕೆ ಬಿದ್ದು ಬರೆಯಲಿಲ್ಲ. ತಮ್ಮದೇ ವಿಶಿಷ್ಠ ಮಾದರಿಯ ಬರಹಗಳನ್ನು ಅವರು ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸೂಪರ್ ವೈಸರ್ ಶ್ರೀನಿವಾಸ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಚಾರಣ, ವಿಚಾರ ಸಂಕಿರಣ, ಸಂವಾದ, ನಾಟಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯ, ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಲಾಕೃತಿಗಳ ಗ್ಯಾಲರಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನ ನಿರ್ಮಾಣವಾಗಲಿದೆ ಎಂದರು.
ತೇಜಸ್ವಿ ಒಡನಾಡಿಗಳು ಮತ್ತು ಕಲಾವಿದರಾದ ಬಾಪು ದಿನೇಶ್ ಮಾತನಾಡಿದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ, ತಾಂತ್ರಿಕ ಸಹಾಯಕರಾದ ನವದೀಪ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞ ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತಾಂತ್ರಿಕ ನಿರ್ವಾಹಕ ಸ್ಯಾಮ್ಯುಯೆಲ್ ಹ್ಯಾರಿಸ್ ಭಾಗವಹಿಸಿದ್ದರು.
ಕ್ಯಾಲಿಗ್ರಫಿ ಪ್ರದರ್ಶನ: ತೇಜಸ್ವಿ ಅವರ 86ನೇ ಜನ್ಮದಿನದ ಪ್ರಯುಕ್ತ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಪ್ರದರ್ಶನ ನಡೆದಿದ್ದು, ಸುಮಾರು 50 ಕ್ಯಾಲಿಗ್ರಫಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.