ಮಂಗಳೂರು: ನಾಗರ ಕಟ್ಟೆ, ವೃತ್ತಾಕಾರದ ಕಟ್ಟೆಯ ಬಾವಿ, ಅಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿಯುವ ಆಟಿ ಕಳಂಜ, ಹಸಿರು ತುಂಬಿದ ಗದ್ದೆ, ತೋಟ...ಗ್ರಾಮೀಣ ಸೌಂದರ್ಯ ಮತ್ತು ಪರಂಪರೆಯನ್ನು ಬಣ್ಣಿಸಲು ಬಣ್ಣಗಳಲ್ಲಿ ಸೃಷ್ಟಿಯಾದ ಚಿತ್ರಗಳು. ಹಸಿದ ಹೊಟ್ಟೆಗೆ ಮಧ್ಯಾಹ್ನ ಗಂಜಿ ಊಟ, ಪತ್ರಡೆ, ಕೊಲ್ಲತರು ಚಟ್ನಿ...
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಹಿಳಾ ಘಟಕ ತುಳು ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಆಟಿದ ಗೇನ’ (ಆಟಿಯ ಅರಿವು) ಕಾರ್ಯಕ್ರಮದಲ್ಲಿ ತುಳುನಾಡಿನ ಐಸಿರಿಯೇ ತುಂಬಿತ್ತು. ಮರಿಯಲದ ತುಳುನಾಡ್ (ಮಳೆಗಾಲದಲ್ಲಿ ತುಳುನಾಡು) ವಿಷಯದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ತಾವು ಕಂಡು, ಕೇಳಿ ತಿಳಿದ ಊರಿನ ಕಲ್ಪನೆಗೆ ಬಣ್ಣ ತುಂಬಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯೆ ಅತ್ರಾಡಿ ಅಮೃತಾ ಶೆಟ್ಟಿ, ಕಷಾಯ ಕುಡಿದು 101 ಬಗೆಯ ಅಡುಗೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವುದು ಮಾತ್ರ ಆಟಿಯಲ್ಲ. ಪೂರ್ವಿಕರು ಈ ತಿಂಗಳಲ್ಲಿ ಅನುಭವಿಸಿದ ಸಂಕಷ್ಟವನ್ನು ತಿಳಿದು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆಗಬೇಕು ಎಂದರು.
‘ತಜಂಕ್ (ತಗತೆ) ಸೊಪ್ಪನ್ನು ಈಗ ಎಣ್ಣೆಯಲ್ಲಿ ಕಾಯಿಸಿ ಪಲ್ಯ ಮಾಡುತ್ತಾರೆ. ಆದರೆ ಹಿಂದಿನವರಿಗೆ ಎಣ್ಣೆಯಲ್ಲಿ ಕಾಯಿಸುವಷ್ಟು ಆರ್ಥಿಕ ಬಲ ಇರಲಿಲ್ಲ. ಆಟಿ ಅಮಾವಾಸ್ಯೆಯ ದಿನವೇ ಪಾಲೆ ಮರದ ಕಷಾಯ ಯಾಕೆ ಕುಡಿಯುತ್ತಾರೆ ಎಂಬುದನ್ನು ತಿಳಿಯಬೇಕು. ಆಚರಣೆಗಳ ಕಾರಣ ಮತ್ತು ಪರಿಣಾಮಗಳನ್ನು ಅರಿಯಬೇಕು. ಪಾಲೆ ಮರದ ಕಷಾಯ ಹಿಂದಿನವರಿಗೆ ಬದುಕಿನ ಭಾಗವಾಗಿತ್ತು. ಈಗ ಅದು ಆಚರಣೆಯಾಗಿ ಉಳಿದಿದೆ. ಆಟಿ ಎಂದರೆ ಅನಿಷ್ಟವಲ್ಲ. ಶುಭಕರವಾದ, ಸುಖದ ತಿಂಗಳು. ಆದರೆ ಅನಿಷ್ಟ ಎನ್ನುವುದರ ಮೂಲಕ ಹಿರೀಕರು ಅದಕ್ಕೆ ಮೌಲ್ಯವೊಂದನ್ನು ಕೊಟ್ಟಿದ್ದಾರೆ. ಆಟಿ, ತುಳುವ ಮಹಿಳೆ ಸಂಸಾರವನ್ನು ನಿಭಾಯಿಸುವ ತಾಕತ್ತನ್ನು ತಿಳಿಸುವ ತಿಂಗಳು ಕೂಡ ಆಗಿದೆ’ ಎಂದು ಅವರು ಹೇಳಿದರು.
ಹಿಂದಿನವರಿಗೆ ಕಷ್ಟಗಳಿದ್ದರೂ ಅದನ್ನು ಸುಖವಾಗಿ ಪರಿವರ್ತಿಸಿ ಸಂತಸಪಟ್ಟರು. ಈಗಿನವರಿಗೆ ಬ್ಯಾಂಕ್ ಬ್ಯಾಲೆನ್ಸ್ನಲ್ಲಿ ₹ 100 ಕಡಿಮೆಯಾದರೂ ಆತಂಕವಾಗಿ ಚಡಪಟಿಕೆ ಆರಂಭವಾಗುತ್ತದೆ ಎಂದ ಅಮೃತಾ ಶೆಟ್ಟಿ ಅವರು ಆಟಿಯಲ್ಲಿ ನೂರೊಂದು ಬಗೆಯ ಅಡುಗೆ ಮಾಡುವುದಕ್ಕಿಂತ ಪೂರ್ವಿಕರು ಅನುಭವಿಸಿದ ನೂರಾರು ಕಷ್ಟಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಎ.ಜೆ ಆಸ್ಪತ್ರೆ ಫಿಸಿಯಾಲಜಿ ವಿಭಾಗದ ಡಾ.ಕಲ್ಪನಾ ಅಶ್ಫಕ್, ಶಿಕ್ಷಕರಾದ ಚೈತ್ರಾ, ಶಕುಂತಲಾ ಎಸ್, ಮಲ್ಲಿಕಾ ರಘುರಾಜ್, ಪಿಡಿಒ ವಸಂತಿ ಜಯಪ್ರಕಾಶ್, ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಸಿಬ್ಬಂದಿ ಪವಿತ್ರಾ ಕೆ, ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಚೇತನಾ ರೋಹಿತ್ ಉಳ್ಳಾಲ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ಕವಿತಾ ಶೈಲೇಶ್ ಭಾಗವಹಿಸಿದ್ದರು.
ಆಟಿ ನೆಪದಲ್ಲಿ ಗದ್ದೆಯಲ್ಲಿ ಆಡುವುದರ ಬದಲು ಭತ್ತ ಬೆಳೆಯಿರಿ. ಹಡಿಲು ಬಿದ್ದ ಗದ್ದೆಗಳಲ್ಲಿ ಬೆಳೆ ತೆಗೆದು ಜೀವ ಕಳೆ ತುಂಬಲು ಪ್ರಯತ್ನಿಸಿ. ಗದ್ದೆಯಲ್ಲಿ ಆಡುವ ಕಾರ್ಯಕ್ರಮಕ್ಕೆ ತುಳು ಸಾಹಿತ್ಯ ಅಕಾಡೆಮಿ ಹಣ ನೀಡುವುದಿಲ್ಲ.ತಾರಾನಾಥ ಗಟ್ಟಿ ಕಾಪಿಕಾಡ್ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.