ADVERTISEMENT

ರದ್ದುಗೊಂಡ ಟಿಕೆಟ್‌ ಬಳಕೆ: ಒಬ್ಬ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 16:49 IST
Last Updated 8 ಜುಲೈ 2019, 16:49 IST

ಮಂಗಳೂರು: ರದ್ದುಗೊಂಡಿದ್ದ ವಿಮಾನ ಪ್ರಯಾಣ ಟಿಕೆಟ್‌ ಬಳಸಿಕೊಂಡು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ಗಮನ ವಲಯ ಪ್ರವೇಶಿಸಿದ್ದ ಒಬ್ಬನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಕೆವಿನ್‌ ವೆರ್ನಾನ್‌ ಫರ್ನಾಂಡಿಸ್‌ ಎಂಬುವವರು ಪತ್ನಿಯೊಂದಿಗೆ ಸೋಮವಾರ ಸಂಜೆ 5.25ಕ್ಕೆ ಚೆಕ್‌ ಇನ್‌ ಕೌಂಟರ್‌ ಮೂಲಕ ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶಿಸಿದ್ದರು. 8.05ಕ್ಕೆ ದುಬೈಗೆ ಹೊರಡಲಿದ್ದ ಏರ್‌ ಇಂಡಿಯಾ ವಿಮಾನದ ಟಿಕೆಟ್‌ ಮತ್ತು ಪಾಸ್‌ಪೋರ್ಟ್‌ ಪ್ರದರ್ಶಿಸಿ ಪ್ರಯಾಣಿಕರ ನಿರ್ಗಮನ ಪ್ರದೇಶಕ್ಕೆ ತೆರಳಿದ್ದರು.

ಸಂಜೆ 6.01ರ ವೇಳೆಗೆ ಕೆವಿನ್‌ ನಿರ್ಗಮನ ದ್ವಾರದಿಂದ ವಾಪಸು ಬರುತ್ತಿರುವಾಗ ಸಿಐಎಸ್‌ಎಫ್‌ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪತಿ ಮತ್ತು ಪತ್ನಿಯ ಪ್ರಯಾಣಕ್ಕೆ ಎರಡು ಟಿಕೆಟ್‌ ಖರೀದಿಸಲಾಗಿತ್ತು. ನಂತರ ಪತಿಯ ಪ್ರಯಾಣದ ಟಿಕೆಟ್‌ ರದ್ದುಗೊಳಿಸಲಾಗಿತ್ತು. ಆದರೆ, ರದ್ದುಗೊಂಡ ಸೀಟಿನ ಇ–ಟಿಕೆಟ್‌ ಕೆವಿನ್‌ ಬಳಿಯೇ ಉಳಿದಿತ್ತು. ಅದನ್ನು ಬಳಸಿಕೊಂಡು ಪತ್ನಿಗೆ ಸಹಾಯ ಮಾಡಲು ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶಿಸಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ADVERTISEMENT

ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರ ವಶಕ್ಕೆ ನೀಡಿರುವ ಸಿಐಎಸ್‌ಎಫ್‌ ಅಧಿಕಾರಿಗಳು, ಈ ಸಂಬಂಧ ದೂರೊಂದನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.