ADVERTISEMENT

ಮಂಗಳೂರು: ಅಮ್ಮನ ಹೆಸರಿನಲ್ಲಿ ಹೆಚ್ಚಿದ ‘ಹಸಿರು’

ಸಂಧ್ಯಾ ಹೆಗಡೆ
Published 23 ಆಗಸ್ಟ್ 2025, 7:16 IST
Last Updated 23 ಆಗಸ್ಟ್ 2025, 7:16 IST
   

ಮಂಗಳೂರು: ಶಾಲಾ ಹಂತದಲ್ಲಿ ನಡೆದ ‘ಅಮ್ಮನ ಹೆಸರಿನಲ್ಲಿ ಒಂದು ಗಿಡ’ 2.0 (ಎಕ್ ಪೇಡ್ ಮಾ ಕೆ ನಾಮ್) ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.

1,488 ಶಾಲೆಗಳ ವಿದ್ಯಾರ್ಥಿಗಳು ಒಟ್ಟು 44,805 (ಆ.18ರವರೆಗೆ) ಗಿಡಗಳನ್ನು ನಾಟಿ ಮಾಡುವ ಮೂಲಕ ರಾಜ್ಯಕ್ಕೆ ಪ್ರಥಮರಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 1,501 ಶಾಲೆಗಳ ವಿದ್ಯಾರ್ಥಿಗಳು 42,483 ಗಿಡಗಳನ್ನು ಮಾಡಿ ದ್ವಿತೀಯ ಸ್ಥಾನದಲ್ಲಿದ್ದರೆ, ಉಡುಪಿ ಜಿಲ್ಲೆಯ 619 ಶಾಲೆಗಳ 22,749 ವಿದ್ಯಾರ್ಥಿಗಳು ಅಮ್ಮನ ಹೆಸರಿನಲ್ಲಿ ಗಿಡ ನೆಟ್ಟು ತೃತೀಯ ಸ್ಥಾನದಲ್ಲಿದ್ದಾರೆ. 323 ಸಸಿ ನಾಟಿಯಾಗಿರುವ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ‌

ದೇಶದಲ್ಲಿ ಹಸಿರು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಕ್ ಪೇಡ್ ಮಾ ಕೆ ನಾಮ್ 2.0, ಎರಡನೇ ಹಂತದ ಕಾರ್ಯಕ್ರಮವು ಜೂನ್ 5ರ ಪರಿಸರ ದಿನಾಚರಣೆಯಂದು ಪ್ರಾರಂಭವಾಗಿದೆ.

ADVERTISEMENT

ಶಾಲೆಗಳಲ್ಲಿ ಮಿಷನ್ ಲೈಫ್ ಎಕೊ ಕ್ಲಬ್ ರಚಿಸಿ, ಅವುಗಳ ಮೂಲಕ ಜಿಲ್ಲೆಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಸೇರಿದಂತೆ ಎಲ್ಲ ಶಾಲೆಗಳಿಗೂ ಗಿಡ ನೆಡುವ ಗುರಿ ನೀಡಿ, ವಿಶೇಷ ಮುತುವರ್ಜಿ ವಹಿಸುವಂತೆ ತಿಳಿಸಲಾಗಿತ್ತು. ಶಿಕ್ಷಕರು ಮತ್ತು ಮಕ್ಕಳ ಪೋಷಕರು ಗಿಡಗಳನ್ನು ತರುವ, ಅದರ ವೆಚ್ಚ ಹಾಗೂ ನಾಟಿ ಮಾಡುವ ಹೊಣೆ ನಿರ್ವಹಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ದಿಷ್ಟ ಜಾತಿಯ ಗಿಡ ಎಂದು ನಿಗದಿಪಡಿಸಲಾಗಿಲ್ಲ. ಹೀಗಾಗಿ, ಮಕ್ಕಳು ಹೂವು, ಹಣ್ಣು, ಔಷಧೀಯ ಸಸ್ಯ, ಕಾಡು ಗಿಡಗಳು, ಕೃಷಿಗೆ ಪೂರಕವಾದ ಗಿಡಗಳು ಸೇರಿದಂತೆ ಬಗೆ ಬಗೆಯ ಗಿಡಗಳನ್ನು ನೆಟ್ಟಿದ್ದಾರೆ. ಪ್ರತಿ ಮಗು ಅಮ್ಮನೊಂದಿಗೆ ಗಿಡ ನೆಡುವ ಚಿತ್ರ ತೆಗೆದು ಇಲಾಖೆ ನೀಡಿರುವ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಆಯಾ ತರಗತಿಯ ಶಿಕ್ಷಕರು ತಮ್ಮ ತರಗತಿಯಲ್ಲಿ ಇರುವ ಮಕ್ಕಳ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಹೊಣೆ ನಿರ್ವಹಿಸಿದ್ದಾರೆ. ಶಿಕ್ಷಕರು, ಮಕ್ಕಳನ್ನು ಹುರಿದುಂಬಿಸಿದ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೇಳಿದರು.

‘53 ಲಕ್ಷ ಗಿಡ ನೆಡುವ ಗುರಿ’

ಅಭಿಯಾನ ಈ ತಿಂಗಳು ಮುಗಿಯಲಿದ್ದು, ಫೋಟೊಗಳನ್ನು ಅಪ್‌ಲೋಡ್ ಮಾಡಲು ಸೆ.30ರವರೆಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 20,355 ಶಾಲೆಗಳ ಮಕ್ಕಳ ಮೂಲಕ 53,05,020 ಗಿಡಗಳನ್ನು ನೆಡುವ ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 2,74,397 ಗಿಡಗಳು ನಾಟಿಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪುತ್ತೂರು: ಶೇ 99.65 ಸಾಧನೆ

ಜಿಲ್ಲೆಯಲ್ಲಿ ಪುತ್ತೂರು ತಾಲ್ಲೂಕು ಶೇ 99.65ರಷ್ಟು ಸಾಧನೆ ಮಾಡಿದ್ದರೆ, ಸುಳ್ಯ ಶೇ 89.95, ಮೂಡುಬಿದಿರೆ ಶೇ 83.48, ಬೆಳ್ತಂಗಡಿ ಶೇ 82.14, ಮಂಗಳೂರು ದಕ್ಷಿಣ ಶೇ 79.64, ಮಂಗಳೂರು ಉತ್ತರ ಶೇ 77.04, ಬಂಟ್ವಾಳ ಶೇ 67.96ರಷ್ಟು ಸಾಧನೆ ಮಾಡಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.