
ಉಜಿರೆ: ಭಕ್ತಿಯ ಶಕ್ತಿಯ ಮೂಲಕ ಸಾಮಾಜಿಕ ಅಸಮಾನತೆ, ಭೇದಭಾವ ಹಾಗೂ ಪಿಡುಗುಗಳನ್ನು ನಿವಾರಿಸಿ ಮಾನವೀಯ ಮೌಲ್ಯಗಳೊಂದಿಗೆ ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ ಮೂಡಿಸಿದ ಭಕ್ತಿಕಾಲದ ಹಿಂದಿ ಸಾಹಿತ್ಯವು ಇತಿಹಾಸದಲ್ಲಿ ಸುವರ್ಣಯುಗವಾಗಿದ್ದು, ಸಾರ್ವಕಾಲಿಕ ಮಹತ್ವವನ್ನು ಹೊಂದಿದೆ ಎಂದು ಎಸ್ಡಿಎಂ ಕಾಲೇಜಿನ ಶೈಕ್ಷಣಿಕ ಸಂಯೋಜಕ ಪ್ರೊ.ಎಸ್.ಎನ್.ಕಾಕತ್ಕರ್ ಹೇಳಿದರು.
ಕಾಲೇಜಿನ ಹಿಂದಿ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ‘ವರ್ತಮಾನಕಾಲದಲ್ಲಿ ಭಕ್ತಿಕಾಲದ ಹಿಂದಿ ಸಾಹಿತ್ಯದ ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಕಬೀರ್ದಾಸ್, ಸೂರ್ದಾಸ್, ತುಳಸೀದಾಸ್ ಮೊದಲಾದವರು ಭಕ್ತಿ ಸಾಹಿತ್ಯ ಪ್ರಕಾರಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.
ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ನಿರ್ದೇಶಕ ಸುಭಾಶ್ ಜಿ.ರಾಣೆ ಮಾತನಾಡಿ, ಭಕ್ತಿ ಸಾಹಿತ್ಯದ ಕವಿಗಳು ಭಕ್ತಿಭಾವದ ಮೂಲಕ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಿ ಯಶಸ್ವಿ ಜೀವನ ನಡೆಸಬಹುದು ಎಂದು ಸಾಹಿತ್ಯ ಕೃತಿಗಳ ಮೂಲಕ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಪುದುಚೇರಿ ವಿ.ವಿ.ಯ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ದಿಲೀಪ್ ಮೆಹರಾ ಮಾತನಾಡಿ, ಜೀವನದಲ್ಲಿ ಧರ್ಮ ಮತ್ತು ಸಂಸ್ಕಾರದ ಅನುಷ್ಠಾನದಿಂದ ಮಾತ್ರ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.
ಎಸ್ಡಿಎಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಎನ್.ಸ್ವಾಗತಿಸಿದರು. ಹಿಂದಿ ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.