ಉಜಿರೆ (ದಕ್ಷಿಣ ಕನ್ನಡ): ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ದೇಶದ ಪ್ರಗತಿಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ ಸೇವೆ, ಸಾಧನೆ ಶ್ಲಾಘನೀಯ ಎಂದು ಕೆನರಾ ಬ್ಯಾಂಕ್ನ ಮಹಾಪ್ರಬಂಧಕ ಎಂ.ಭಾಸ್ಕರ ಚಕ್ರವರ್ತಿ ಹೇಳಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್ಸೆಟ್ ಸಂಸ್ಥೆಗಳ) ನಿರ್ದೇಶಕರ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಉಜಿರೆಯಲ್ಲಿ ಆರಂಭಿಸಿದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾದರಿಯಾಗಿದ್ದು, ಕೇಂದ್ರ ಸರ್ಕಾರವೂ ಮಾನ್ಯತೆ ನೀಡಿದೆ. ದೇಶದೆಲ್ಲೆಡೆ ಇಂದು 670 ಸಂಸ್ಥೆಗಳು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡುತ್ತಿವೆ ಎಂದರು.
ಕೌಶಲಾಭಿವೃದ್ಧಿ ಇಂದು ಅಗತ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗೃಹನಿರ್ಮಾಣ ಕಾರ್ಮಿಕರು ಹಾಗೂ ಇತರ ಕುಶಲಕರ್ಮಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಕೌಶಲಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಂಸ್ಥೆಗಳ ಪ್ರಗತಿ, ಸಾಧನೆ ಗುರುತಿಸಿ ಹೊಸ ಯೋಜನೆಗಳನ್ನು ರೂಪಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶವಾಗಿದೆ. ನಿರ್ದೇಶಕರು ಮತ್ತು ಸಿಬ್ಬಂದಿ ಉತ್ತಮ ಗುಣಮಟ್ಟದ ತರಬೇತಿಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ರುಡ್ಸೆಟ್ ಸಂಸ್ಥೆಗಳ ರಾಷ್ಟ್ರೀಯ ನಿಯಂತ್ರಕ ಬೆಂಗಳೂರಿನ ಆರ್.ಆರ್.ಸಿಂಗ್ ಮಾತನಾಡಿ, ತರಬೇತಿ ವೇಳೆ ನಿರುದ್ಯೋಗಿಗಳಲ್ಲಿ ನಾಯಕತ್ವ ಗುಣವನ್ನೂ ಬೆಳೆಸಬೇಕು ಎಂದು ಹೇಳಿದರು.
ರುಡ್ಸೆಟ್ ಸಂಸ್ಥೆಗಳ ಮಹಾನಿರ್ದೇಶಕ ರಾಜು ಎನ್.ಕೋರಿ ಮಾತನಾಡಿ, ಗ್ರಾಮೀಣ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಹೊಸತನದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಉನ್ನತ ಸಾಧನೆ ಮಾಡಿದ ರುಡ್ಸೆಟ್ ಸಂಸ್ಥೆಗಳನ್ನು ಗೌರವಿಸಲಾಯಿತು.
ಆರ್ಥಿಕ ಆದಾಯ: ರುಡ್ಸೆಟ್ ಸಂಸ್ಥೆ, ಒಂಗೋಲ್ (ಪ್ರಥಮ), ರುಡ್ಸೆಟ್ ಸಂಸ್ಥೆ, ಧಾರವಾಡ (ದ್ವಿತೀಯ).
ವಾರ್ಷಿಕ ಕಾರ್ಯಯೋಜನೆ: ರುಡ್ಸೆಟ್ ಸಂಸ್ಥೆ, ವಿಜಯಪುರ (ಪ್ರಥಮ), ರುಡ್ಸೆಟ್ ಸಂಸ್ಥೆ ಹಾಜಿಪುರ (ದ್ವಿತೀಯ).
ರುಡ್ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯಕುಮಾರ್ ಸ್ವಾಗತಿಸಿದರು. ಉಜಿರೆ ಸಂಸ್ಥೆಯ ನಿರ್ದೇಶಕ ಅಜೇಯ ವಂದಿಸಿದರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.