ADVERTISEMENT

ಉಜಿರೆ ಜನಾರ್ದನ ದೇವಸ್ಥಾನ: ಬ್ರಹ್ಮಕಲಶೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:21 IST
Last Updated 3 ಮಾರ್ಚ್ 2026, 7:21 IST
ಹಂಗಾರಕಟ್ಟೆ ಬಾಳೆಕುದ್ರುಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಸೋಮವಾರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು
ಹಂಗಾರಕಟ್ಟೆ ಬಾಳೆಕುದ್ರುಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಸೋಮವಾರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು   

ಉಜಿರೆ: ದೇವರ ಸಾನ್ನಿಧ್ಯದಲ್ಲಿ ಅರ್ಚಕರು ಹಾಗೂ ತಂತ್ರಿಗಳು ಮಾಡುವ ವೇದ, ಪುರಾಣಗಳ ಪಾರಾಯಣ, ಮಂತ್ರಪಠಣ, ಅನ್ನದಾನದಿಂದ ದೇವರ ಸಾನ್ನಿಧ್ಯ ವೃದ್ಧಿಯಾಗಿ ಭಕ್ತರ ಪ್ರಾರ್ಥನೆ, ಅಭೀಷ್ಟಗಳು ಈಡೇರುತ್ತವೆ ಎಂದು ಉಡುಪಿ ಜಿಲ್ಲಾ ಹಂಗಾರಕಟ್ಟೆ ಬಾಳೆಕುದ್ರಿ ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.

ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇವರು ಸರ್ವವ್ಯಾಪ್ತಿಯಾಗಿದ್ದು, ವಿವಿಧ ಹೆಸರುಗಳಿಂದ ಭಕ್ತರು ಪೂಜೆ, ಆರಾಧನೆ ಮಾಡುತ್ತಾರೆ. ದೇವರ ಪಾವನ ಸಾನ್ನಿಧ್ಯದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ತಮ್ಮ ನಿವೇದನೆಗಳನ್ನು ಮಾಡಿದಾಗ ಅವುಗಳ ಪರಿಹಾರವಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ವಿಶೇಷ ಪೂಜೆ, ಆರಾಧನೆಗಳಿಂದ ಜನರ ಕಲ್ಯಾಣದೊಂದಿಗೆ ಲೋಕಕಲ್ಯಾಣವೂ ಆಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ADVERTISEMENT

‘ಸುರುಚಿ’ ಪಾಕಶಾಲೆ ಉದ್ಘಾಟಿಸಿದ ಬೆಂಗಳೂರು ಕ್ಷೇಮವನದ ಸಿಇಒ ಶ್ರದ್ಧಾಅಮಿತ್ ಮಾತನಾಡಿ, ಅನ್ನದಾನಕ್ಕೆ ವಿಶೇಷ ಮಹತ್ವ ಇದೆ. ರೈತರು ಬೆಳೆದ ಹಣ್ಣು, ತರಕಾರಿ, ಎಳನೀರು, ತೆಂಗಿನಕಾಯಿಗಳನ್ನು ಹೊರೆಕಾಣಿಕೆಯಾಗಿ ಅರ್ಪಿಸಿದ್ದು, ಈಗಾಗಲೇ ಉಗ್ರಾಣ ಭರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಗವಂತನ ಅನುಗ್ರಹದೊಂದಿಗೆ ಅನ್ನದಾನದಿಂದ ಕೃಷಿಕರ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರದ್ಧಾಅಮಿತ್ ಅಭಿಪ್ರಾಯಪಟ್ಟರು.

ಸುರ್ಯ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಪ್ರೊ.ಸತೀಶ್ಚಂದ್ರ, ಮುಂಡಾಜೆಯ ಶ್ರೀಧರ ಜಿ. ಭಿಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಆಧ್ಯಾತ್ಮವೇ ಭಾರತದ ಆತ್ಮವಾಗಿದೆ. ಭಕ್ತಯಿಂದ ಭಗವಂತನ ಸೇವೆ ಮಾಡಿದಾಗ ಸಕಲ ಕಷ್ಟಗಳ ಪರಿಹಾರವಾಗಿ ಲೋಕಕಲ್ಯಾಣವಾಗುತ್ತದೆ ಎಂದರು.

ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರವೀಂದ್ರ ಶೆಟ್ಟಿ ವಂದಿಸಿದರು.

ಎಸ್‌ಡಿಎಂ ಸನಿವಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಗ್ರಹಣ ಪ್ರಯುಕ್ತ ಸಭೆ ಸಮಾರಂಭ ಇರುವುದಿಲ್ಲ: ಚಂದ್ರಗ್ರಹಣ ಪ್ರಯುಕ್ತ ಮಂಗಳವಾರ ಯಾವುದೇ ಸಭೆ-ಸಮಾರಂಭ ಇರುವುದಿಲ್ಲ.

ಬೆಳ್ತಂಗಡಿ ತಾಲ್ಲೂಕು ವಿಪ್ರಸಮಾಜದ ವತಿಯಿಂದ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಶತರುದ್ರಾಭಿಷೇಕ, ವಾಸ್ತುಹೋಮ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಹಂಗಾರಕಟ್ಟೆ ಬಾಳೆಕುದ್ರುಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಸೋಮವಾರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು

ವಿಜಯಗೋಪುರ ಲೋಕಾರ್ಪಣೆ ನಾಳೆ: ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವಿಜಯಗೋಪುರ ಲೋಕಾರ್ಪಣೆ ಮಾಡುವರು. ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತಿ  ಸ್ವಾಮೀಜಿ ಆಶೀವರ್ಚನ ನೀಡುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸುವರು. 

ಸಂಜೆ 6 ಗಂಟೆಗೆ ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಮೂಡುಬಿದಿರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಶೀರ್ವಚನ ನೀಡುವರು.

ಹಂಗಾರಕಟ್ಟೆ ಬಾಳೆಕುದ್ರುಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಸೋಮವಾರ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.