
ಬಂಧನ
ಮಂಗಳೂರು: ‘ಸಪೋರ್ಟ್ ಮಾಡಿ ಬ್ರೋ. ಉಳ್ಳಾಲ ಮಸೀದಿ ಹತ್ತಿರ ಬಾಂಬ್ ಬ್ಲಾಸ್ಟ್ ಮಾಡುತ್ತೇನೆ’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಆರೋಪಿಯನ್ನು ಉಳ್ಳಾಲ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ದೇವಿನಗರದ ಶಂಕರ್ ಮಸ್ತಪ್ಪ ಮೊಗೆರ್ (35 ವರ್ಷ) ಬಂಧಿತ ಆರೋಪಿ. ಆತ ಕೃತ್ಯಕ್ಕೆ ಬಳಸಿದ ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬೇರೊಬ್ಬರು ಹಂಚಿಕೊಂಡ ಪೋಸ್ಟ್ಗೆ ಆರೋಪಿಯು ‘ಶಂಕರ್11916’ ಎಂಬ ಖಾತೆಯ ಬಳಸಿ ಈ ರೀತಿ ಕಮೆಂಟ್ ಮಾಡಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196(2) (ಧರ್ಮದ ಆಧಾರದಲ್ಲಿ ಬೇರೆ ಬೇರೆ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವುದು), ಸೆಕ್ಷನ್ 197(2) (ಆರಾಧನ ಸ್ಥಳ, ಧಾರ್ಮಿಕ ಸ್ಥಳಗಳ ಕುರಿತು ಸುಳ್ಳು ಸುದ್ದಿ ಹರಡಿಸಿ ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವುದು), ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವುದು) ಹಾಗೂ ಸೆಕ್ಷನ್ 353(2)ರ (ವಿದ್ಯುನ್ಮಾನ ಮಾಧ್ಯಮ ಬಳಸಿ ಸುಳ್ಳು ಸುದ್ದಿ ಹರಡುವುದು) ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.