ADVERTISEMENT

ಬೆಳ್ತಂಗಡಿ | ಆನೆ ಹಾವಳಿ ತಡೆಗಟ್ಟಲು ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:52 IST
Last Updated 22 ಜುಲೈ 2025, 4:52 IST
ಆನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ಸಿರೋ ಮಲಬಾರ್ ಕಥೋಲಿಕ್‌ ಅಸೋಸಿಯೇಷನ್‌ ವತಿಯಿಂದ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು
ಆನೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಕರ್ನಾಟಕ ಸಿರೋ ಮಲಬಾರ್ ಕಥೋಲಿಕ್‌ ಅಸೋಸಿಯೇಷನ್‌ ವತಿಯಿಂದ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು   

ಬೆಳ್ತಂಗಡಿ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಿರೋ ಮಲಬಾರ್ ಕಥೋಲಿಕ್‌ ಅಸೋಸಿಯೇಷನ್ ವತಿಯಿಂದ ಸೋಮವಾರ ಬೆಳ್ತಂಗಡಿಯಲ್ಲಿ ಮೆರವಣಿಗೆ ನಡೆಸಿ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಎಸ್‌ಎಂಸಿಎ ನಿರ್ದೇಶಕ ಫಾ.ಆದರ್ಶ್ ಜೋಸೆಫ್‌, ಕಾಡುಪ್ರಾಣಿಗಳ ಹಾವಳಿಯಿಂದಾಗಿ ಕೃಷಿಕರು ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕಾಡಾನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಕರು ನೋಟಾ ಚಳವಳಿಯ ದಾರಿಯನ್ನು ಅನುಸರಿಸಬೇಕಾಗಿ ಬರಲಿದೆ’ ಎಂದರು.

ಕೆಎಸ್‌ಎಂಸಿಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ಮಾತನಾಡಿ, ‘ಬೆಳ್ತಂಗಡಿ ತಾಲ್ಲೂಕಿನ ಮಲೆನಾಡಿನ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕೃಷಿಕರು ತೋಟಗಳಿಗೆ ತೆರಳಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕ ಆನೆ ದಾಳಿಗೆ ಬಲಿಯಾಗಿದ್ದಾರೆ. ಹೋರಾಟದ ಮುಂದಿನ ಭಾಗವಾಗಿ ಅರಣ್ಯ ಸಚಿವರನ್ನು ಭೇಟಿಯಾಗಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ವರಿಸಿದರು.

ADVERTISEMENT

ಪ್ರತಿಭಟನೆಯನ್ನು ಉದ್ದೇಶಿಸಿ ಚಿಂತಕ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ, ‘ಕಾಡಾನೆ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಆನೆಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ಆನೆ ಕಂದಕ ಸೇರಿದಂತೆ ಎಲ್ಲ ವಿಧಾನಗಳನ್ನು ಮಾಡಲಾಗುತ್ತಿದೆ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಗುರಿಯೊಂದಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೆರವಣಿಗೆ ನಡೆಯಿತು.

ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ., ಪಿಆರ್‌ಒ ಸೆಬಾಸ್ಟಿಯನ್ ಪಿ.ಸಿ., ಯುವ ಘಟಕದ ಸಂಚಾಲಕ ರಾಬಿನ್ ಓಡಂಪಳ್ಳಿ, ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ಧರ್ಮಗುರುಗಳಾದ ಫಾ.ರಿಜೊ, ಫಾ.ಥಾಮಸ್, ಫಾ.ಜೋಸೆಫ್, ಮುಖಂಡರಾದ ಕ್ಸೇವಿಯರ್ ಪಾಲೇಲಿ, ಕೇಶವ ಪಿ. ಬೆಳಾಲು, ದೇವಸ್ಯ ಟಿ.ವಿ.ಧರ್ಮಸ್ಥಳ, ರೋಯಿ ಪುದುವೆಟ್ಟು, ಪ್ರದೀಪ್ ಕೆ.ಸಿ., ರೆಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.