ಉಳ್ಳಾಲ: ಪವಿತ್ರ ಹಜ್ ಯಾತ್ರೆ ಮುಗಿಸಿ ಮರಳಿದ ಸ್ಪೀಕರ್ ಯು.ಟಿ.ಖಾದರ್ ಮತ್ತು ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ ಅವರು ಮಂಗಳವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಉಳ್ಳಾಲ ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು, ಮಂಗಳೂರು ವಿಧಾನಸಭಾ ಕ್ಷೇತ್ರದ ನಾಗರಿಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಯು.ಟಿ.ಖಾದರ್ ಮತ್ತು ಇಫ್ತಿಕಾರ್ ಅಲಿಯವರನ್ನು ಸ್ವಾಗತಿಸಿದರು.
ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಯು.ಟಿ.ಖಾದರ್, ಜೀವನದಲ್ಲಿ ಯಾವುದೂ ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆಯುವುದಿಲ್ಲ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದದಿಂದ ಪವಿತ್ರ ಹಜ್ ಯಾತ್ರೆಯನ್ನು ಕೈಗೊಳ್ಳುವಂತಾಯಿತು. ಖಲೀಲ್ ತಂಞಳ್ ಅವರ ಮಾರ್ಗದರ್ಶನದಲ್ಲಿ ಯಾತ್ರೆಯು ಸುಸೂತ್ರವಾಗಿ ನಡೆಯಿತು. ಉಳ್ಳಾಲ ದರ್ಗಾದಲ್ಲಿ ನನ್ನ ಹೆತ್ತವರ ಸಮಾಧಿಯೂ ಇದ್ದು, ಇದು ನನ್ನ ಅಚ್ಚು ಮೆಚ್ಚಿನ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಹಜ್ನಿಂದ ಮರಳಿ ಮನೆಗೆ ತೆರಳುವ ಮುನ್ನ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೇನೆ. ನನ್ನ ಮದುವೆಯ ದಿನದಂದೂ ಮನೆಗೆ ತೆರಳುವ ಮೊದಲು ನೇರವಾಗಿ ಇಲ್ಲಿಗೆ ಬಂದು ಪ್ರಾರ್ಥಿಸಿದ್ದೆ ಎಂದು ಹೇಳಿದರು.
ಉಳ್ಳಾಲ ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಣಚೂರು ಸಮೂಹ ಸಂಸ್ಥೆಯ ಚೇರ್ಮನ್ ಕಣಚೂರು ಮೋನು, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ಎನ್.ಎಸ್.ಕರೀಂ, ಮಹಮ್ಮದ್ ಮುಸ್ತಾಫ ಹರೇಕಳ, ಝಕಾರಿಯ ಮಲಾರ್, ಪುರುಷೋತ್ತಮ ಶೆಟ್ಟಿ ಪಿಲಾರು, ಜಬ್ಬಾರ್ ಬೋಳಿಯಾರ್, ಉಸ್ಮಾನ್ ಕಲ್ಲಾಪು, ಸಿರಾಜ್ ಕಿನ್ಯ, ನಝರ್ ಷಾ ಪಟ್ಟೋರಿ, ಮನ್ಸೂರ್ ಮಂಚಿಲ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.