ADVERTISEMENT

ದಕ್ಷಿಣ ಕನ್ನಡ: ವಾರಾಂತ್ಯದ ಕರ್ಫ್ಯೂ, ಕಟ್ಟುನಿಟ್ಟಿನ ಕ್ರಮ

ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಚೆಕ್‌ಪೋಸ್ಟ್‌: ವಾಹನಗಳ ಬಿಗಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 4:46 IST
Last Updated 26 ಜೂನ್ 2021, 4:46 IST
ವಾರಾಂತ್ಯದ ಕರ್ಫ್ಯು ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳೂರಿನಲ್ಲಿ ಶುಕ್ರವಾರ ಡಿಸಿಪಿ ಹರಿರಾಂ ಶಂಕರ್‌ ಅವರು, ಪೊಲೀಸರಿಗೆ ಮಾಹಿತಿ ನೀಡಿದರು.
ವಾರಾಂತ್ಯದ ಕರ್ಫ್ಯು ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳೂರಿನಲ್ಲಿ ಶುಕ್ರವಾರ ಡಿಸಿಪಿ ಹರಿರಾಂ ಶಂಕರ್‌ ಅವರು, ಪೊಲೀಸರಿಗೆ ಮಾಹಿತಿ ನೀಡಿದರು.   

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಮಧ್ಯೆ ಜಿಲ್ಲಾಡಳಿತದಿಂದ ಬಿಗಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದ್ದು, ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ವಾರಾಂತ್ಯದ ಕರ್ಫ್ಯೂ ಸಂದರ್ಭ ದಲ್ಲಿ ಆಸ್ಪತ್ರೆ, ಔಷಧಿ ಅಂಗಡಿ, ಹಾಲು, ದಿನಪತ್ರಿಕೆ ಹೊರತುಪಡಿಸಿ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ನಗರದ ಪ್ರವಾಸಿ ಮಂದಿರದ ಬಳಿ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪೊಲೀಸರಿಗೆ ನಿರ್ದೇಶನ ನೀಡಿದ ಡಿಸಿಪಿ ಹರಿರಾಮ್ ಶಂಕರ್, ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ADVERTISEMENT

ಕರ್ಫ್ಯೂ ಕುರಿತ ನಿರ್ದೇಶನಗಳ ಬಗ್ಗೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೇಂದ್ರ, ಉತ್ತರ, ದಕ್ಷಿಣ ಹಾಗೂ ಸಂಚಾರ ಉಪವಿಭಾಗಗಳಿಗೆ ಸೂಚನೆ ನೀಡಲಾಗಿದೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಮುಟ್ಟು ಗೋಲು ಹಾಕಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ವಾದ ಮಾಡುವ ಅಗತ್ಯವಿಲ್ಲ. ತುರ್ತು ಸಂದರ್ಭ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು ಎಂದು ಹೇಳಿದರು.

ಶನಿವಾರ ಮತ್ತು ಭಾನುವಾರ ನಗರದ ಒಳದಾರಿಗಳನ್ನು ಮುಚ್ಚಲಾಗು ವುದು. ಎಲ್ಲ ವಾಹನಗಳು ಚೆಕ್‌ಪೋಸ್ಟ್ ಮೂಲಕವೇ ತೆರಳಲು ಸಿದ್ಧತೆ ನಡೆಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 35 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲೂ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಬಳಸಿಕೊಳ್ಳಲಾವುದು ಎಂದು ತಿಳಿಸಿದರು.

ಖರೀದಿ ಭರಾಟೆ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ
ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಿತ್ತು.

ತರಕಾರಿ, ಹಣ್ಣು ಹಂಪಲು, ಮಾಂಸದಂಗಡಿ ಸೇರಿದಂತೆ ಸೂಪರ್ ಬಝಾರ್, ಸೂಪರ್ ಮಾರುಕಟ್ಟೆಗಳಲ್ಲಿ ಜನರು ಖರೀದಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನಗರದ ಹಂಪಕನಟ್ಟೆ, ರಥಬೀದಿ, ಕಂಕನಾಡಿ, ಪಂಪ್‌ವೆಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ವಾರಾಂತ್ಯ ಕರ್ಫ್ಯೂ ಏನಿರುತ್ತೇ ಏನಿಲ್ಲ?

* ವಾಹನ ರಸ್ತೆಗಳಿದರೆ ವಶಕ್ಕೆ ಪಡೆಯಲು ಆದೇಶ

* ವಾಹನ ವಶಕ್ಕೆ ಪಡೆಯಲು ಪೊಲೀಸರಿಗೆ ಅಧಿಕಾರ

* ವೈದ್ಯಕೀಯ, ಹಾಲು, ಸರ್ಕಾರಿ ಕಚೇರಿಗಳಿಗೆ ಅವಕಾಶ

* ಆನ್‌ಲೈನ್ ಫುಡ್ ಡೆಲಿವರಿಗೆ ಮಾತ್ರ ಅವಕಾಶ

* ಹೋಟೆಲ್‌ಗೆ ಹೋಗಿ ಪಾರ್ಸೆಲ್ ತರುವಂತಿಲ್ಲ

* ಸ್ಥಳದಲ್ಲಿದ್ದವರಿಂದ ಮಾತ್ರ ಕಟ್ಟಡ ಕಾಮಗಾರಿಗೆ ಅನುಮತಿ

* ಕಟ್ಟಡ ಕಾಮಗಾರಿ ಸ್ಥಳಕ್ಕೆ ತೆರಳಲು ಅವಕಾಶ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.