ADVERTISEMENT

ಯಕ್ಷಗರಂಗದ 'ಸಿಡಿಲಮರಿ' ಪುತ್ತೂರು ಶ್ರೀಧರ ಭಂಡಾರಿ ನಿಧನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 3:33 IST
Last Updated 19 ಫೆಬ್ರುವರಿ 2021, 3:33 IST
ಡಾ.ಶ್ರೀಧರ ಭಂಡಾರಿ ಪುತ್ತೂರು
ಡಾ.ಶ್ರೀಧರ ಭಂಡಾರಿ ಪುತ್ತೂರು   

ಪುತ್ತೂರು: ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 'ಶತ ದಿಗಿಣ ವೀರ' ಖ್ಯಾತಿಯ ಡಾ.ಶ್ರೀಧರ ಭಂಡಾರಿ ಪುತ್ತೂರು ಅವರು ನಿಧನರಾಗಿದ್ದಾರೆ.

ಧಿಗಿಣಗಳಿಂದಾಗಿ ಯಕ್ಷಗರಂಗದ ಸಿಡಿಲಮರಿ ಎಂದು ಹೆಸರು ಗಳಿಸಿದ್ದ ಶ್ರೀಧರ ಭಂಡಾರಿ ಅವರಿಗೆ 73 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರಿಗೆ ಕಾಲುನೋವು ಕಾಡಿತ್ತು.

ತಂದೆ ಸಂಘಟಕ, ಕಲಾವಿದ ದಿ. ಪುತ್ತೂರು ಶೀನಪ್ಪ ಭಂಡಾರಿ ಅವರಿಂದ ಯಕ್ಷಗಾನವನ್ನು ಅಭ್ಯಸಿಸಿದ್ದ ಶ್ರೀಧರ ಭಂಡಾರಿ ಅವರು ನಂತರದಲ್ಲಿ ಕುರಿಯ ವಿಠ್ಠಲ ಶಾಸ್ತ್ರಿ, ಹೊಸಹಿತ್ಲು ಮಾಲಿಂಗ ಭಟ್ಟರು, ಕೆ.ಗೋವಿಂದ ಭಟ್ ಸೇರಿದಂತೆ ಹಲವರಿಂದ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡರು. ಸಂಘಟಕರೂ ಆಗಿದ್ದ ಅವರು ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳಗಳನ್ನು ನಡೆಸಿದ್ದರು.

ADVERTISEMENT

ಅಭಿಮನ್ಯು, ಬಭ್ರುವಾಹನ, ಕೃಷ್ಣ, ಭಾರ್ಗವ ಸೇರಿದಂತೆ ಹಲವು ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು.
ಲಂಡನ್, ಜಪಾನ್, ಅಮೆರಿಕಾ, ದುಬೈ, ಬೆಹರೀನ್ ಸೇರಿದಂತೆ ಹಲವು ವಿದೇಶಗಳಲ್ಲಿಯೂ ಅವರು ಯಕ್ಷಗಾನ ಪ್ರದರ್ಶನ ನೀಡಿದ್ದರು.

ಶ್ರೀಧರ ಭಂಡಾರಿ ಅವರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.