ಪ್ರಾತಿನಿಧಿಕ ಚಿತ್ರ
ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೆಲಹೊತ್ತು ಆತಂಕ ಸೃಷ್ಟಿಸಿದ್ದು, ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಬಾಗಲಕೋಟೆ ಜಿಲ್ಲೆ ಹುನಗುಂದದ ಭೀಮಪ್ಪ ತಳವಾರ (24) ಮರ ಏರಿದ್ದ ಯುವಕ.
‘ಅಂದಾಜು 50 ಅಡಿ ಎತ್ತರದ ಮರ ಹತ್ತಿ ಆ ಯುವಕ ಕುಳಿತಿದ್ದ. ಆತನನ್ನು ಕೆಳಗಿಳಿಸಲು ಸಾಕಷ್ಟು ಪ್ರಯತ್ನಿಸಿದೆವು. ಆತ ಇಳಿಯಲು ಒಪ್ಪಲಿಲ್ಲ. ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ಪೊಲೀಸರು, ಅಗ್ನಿಶಾಮಕ ದಳದವರು ಬಂದು ಯುವಕನ ಮನವೊಲಿಸಿ, ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದೆ. ಇಲ್ಲಿ ಕೆಲಸವೂ ಸಿಗಲಿಲ್ಲ. ನನ್ನ ಜೊತೆ ಬಂದವರೂ ಊರಿಗೆ ಮರಳಿದ್ದಾರೆ. ಇದರಿಂದ ಬೇಸರವಾಗಿತ್ತು’ ಎಂದು ಆ ಯುವಕ ಸ್ಥಳೀಯರ ಬಳಿ ಹೇಳಿಕೊಂಡಿದ್ದ. ಮರದಿಂದ ಇಳಿದ ಮೇಲೆ ಆತನನ್ನು ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.