ADVERTISEMENT

ಫರಂಗಿಪೇಟೆ: ಮದುವೆಗೆ ನಿರಾಕರಿಸಿದ ಯುವತಿಗೆ ಇರಿದು ಯುವಕ ಆತ್ಮಹತ್ಯೆ

8 ವರ್ಷಗಳ ಪರಸ್ಪರ ಪ್ರೇಮಿಸಿದ್ದ ಜೋಡಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:08 IST
Last Updated 8 ಜುಲೈ 2025, 5:08 IST
ಸುಧೀರ್‌
ಸುಧೀರ್‌   

ಬಂಟ್ವಾಳ (ದಕ್ಷಿಣ ಕನ್ನಡ): ಫರಂಗಿಪೇಟೆಯ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ, ತನ್ನಿಂದ ಬೇರೆಯಾಗಲು ನಿರ್ಧರಿಸಿದ ಯುವತಿಗೆ ಸೋಮವಾರ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಂಟ್ವಾಳ ತಾಲ್ಲೂಕಿನ ಕೋಡ್ಮಣ್ ಗ್ರಾಮದ ಕಾಂಜಿಲಕೋಡಿ ನಿವಾಸಿ ಸುಧೀರ್ (30) ಯುವತಿಯ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಧೀರ್‌ ಹಾಗೂ ಫರಂಗಿಪೇಟೆಯ 26 ವರ್ಷದ ಯುವತಿ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ತಿಂಗಳಿಂದ ಅವರಿಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಆದರೂ ಸುಧೀರ್ ಆಕೆಗೆ ಫೋನ್ ಮಾಡುತ್ತಿದ್ದ. ಆಕೆ ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ. ಸೋಮವಾರ ಬೆಳಿಗ್ಗೆ ಫರಂಗಿಪೇಟೆ ಬಳಿಯ ಸುಜೀರುವಿನ ಮಲ್ಲಿ ಎಂಬಲ್ಲಿಗೆ ಬಂದಿದ್ದ ಆತ ಮದುವೆಯಾಗುವಂತೆ ಯುವತಿಯನ್ನು ಒತ್ತಾಯಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಅವರಿಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಾದ ಆರೋಪಿ ಯುವತಿಗೆ ಥಳಿಸಿದ್ದ. ತಾನು ತಂದಿದ್ದ ಚಾಕುವಿನಿಂದ ಆಕೆಗೆ ಚುಚ್ಚಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಆಕೆ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದಿದ್ದಳು. ಆಕೆ ಮೃತಪಟ್ಟಿರಬಹುದು ಎಂದು ಭಾವಿಸಿದ್ದ ಆರೋಪಿಯು ಅಲ್ಲಿಂದ ತೆರಳಿ,  ಆ ಯುವತಿ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ತುಂಬೆಯ ಫಾದರ್ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ಯುವತಿಯು ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಮದುವೆಗೆ ನಿರಾಕರಿಸಿದ್ದ ಬಳಿಕ ಸುಧೀರ್ ಹಿಂದೊಮ್ಮೆ ಟವರ್ ಏರಿ ಆಕೆಯನ್ನು ಹೆದರಿಸಲು ಯತ್ನಿಸಿದ್ದ’ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.