ADVERTISEMENT

ಕಸುಬಿನ ಜತೆ ಓದಿಸಿ: ಮುರುಘಾ ಶರಣರು

ಮೇದಾರ ಸಮಾಜದ ಹಾಸ್ಟೆಲ್‌ ಕಟ್ಟಡಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:04 IST
Last Updated 24 ಮಾರ್ಚ್ 2014, 9:04 IST

ದಾವಣಗೆರೆ: ‘ಆಧುನಿಕತೆಯ ಬಿರುಗಾಳಿಗೆ ಸಿಲುಕಿದ್ದರೂ, ಮೇದಾರ ಸಮಾಜ ತನ್ನ ಅಸ್ತಿತ್ವ ಉಳಿಸಿಕೊಂಡಿದೆ’ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಸೇವಾ ಸಂಘದ ವತಿಯಿಂದ ಭಾನುವಾರ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ಏರ್ಪಡಿಸಿದ್ದ ಮೇದಾರ ಸಮಾಜದ ಹಾಸ್ಟೆಲ್ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
‘ಮೇದಾರ ಸಮುದಾಯದ ಜನರು ಈಗಲೂ ಕುಲಕಸುಬನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ.

ಈಚೆಗೆ ಫೈಬರ್ ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು, ಬಿದಿರು ಸಾಮಗ್ರಿಗಳ ಬೇಡಿಕೆ ಕುಸಿದಿದೆ. ಅರಣ್ಯ ಬೆಳೆಸುವುದರ ಜತೆಗೆ ಅರಣ್ಯ ಪ್ರದೇಶಗಳಲ್ಲಿ ಬಿದಿರು ಬೆಳೆಸುವಂಥ ಕಾರ್ಯ ನಡೆಯಬೇಕಿದೆ. ವಿದೇಶಗಳಲ್ಲಿ ಇಂದು ಹೆಚ್ಚಾಗಿ ಬಿದಿರು ಬಳಕೆ ಮಾಡಲಾಗುತ್ತಿದೆ. ಪರಿಸರಕ್ಕೆ ಪೂರಕವಾಗಿರುವ ಬಿದಿರು ಇಂದು ಅವರ ಕರಕುಶಲತೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ’ ಎಂದರು.

‘ಮೇದಾರ ಸಮುದಾಯದ ಜನರು ತಮ್ಮ ಕಸುಬಿನ ಜತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶೈಕ್ಷಣಿಕ ಬೆಳವಣಿಗೆಯಿಂದ ಎಂಥ ಸಮುದಾಯವಾದರೂ ಉನ್ನತಿ ಸಾಧಿಸಬಲ್ಲುದು. ಶಿಕ್ಷಣದ ಜತೆಗೆ ಆರ್ಥಿಕವಾಗಿ ಸದೃಢತೆ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸೇವಾ ಸಂಘದ ಅಧ್ಯಕ್ಷ ಬಿ.ಸೋಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಬಸವಪ್ರಭು ಸ್ವಾಮೀಜಿ, ಬಿ.ಸಿ.ಉಮಾಪತಿ, ಬಸವರಾಜ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.