ADVERTISEMENT

`ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ'

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:05 IST
Last Updated 20 ಜುಲೈ 2013, 10:05 IST

ಹರಿಹರ: `ಹರಿಹರ ಕ್ಷೇತ್ರದ ಜನತೆ ಎಚ್.ಎಸ್.ಶಿವಶಂಕರ್‌ಗೆ ಈ ಬಾರಿ ಅವಕಾಶ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ನಮ್ಮ ಪಕ್ಷ ಅವರಿಗೆ ಸಂಪೂರ್ಣ ಸಹಕರಿಸುವುದು' ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಹೇಳಿದರು.

ವಿಧಾನಸಭೆ ಚುನಾವಣೆಯಾಗಿ ಎರಡು ತಿಂಗಳ ನಂತರ ನಗರಕ್ಕೆ ಆಗಮಿಸಿದ ಅವರು, ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಕೆಜೆಪಿ ಕಾರ್ಯಕರ್ತರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಸಮಸ್ಯೆಗಳಿದ್ದ ಕಾರಣ, ರಾಜಕೀಯ ಚಟುವಟಿಕೆಯಿಂದ ಎರಡು ತಿಂಗಳು ದೂರವಾಗಿದ್ದೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ವಿಧಾನಸಭೆ ಚುನಾವಣೆಯ ಸೋಲನ್ನು ಸಕಾರಾತ್ಮಾಕವಾಗಿ ತೆಗೆದುಕೊಳ್ಳುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ. ನಂತರ ನಗರಸಭೆ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇವುಗಳಲ್ಲಿ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಹಾಗೂ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಪಕ್ಷದ ಹಿರಿಯ ಕಾರ್ಯಕರ್ತರೊಂದಿಗೆ ಚರ್ಚಿಸಿ, ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ತಾಲೂಕು ಪಂಚಾಯ್ತಿ ಸದಸ್ಯ ಭೀಮಣ್ಣ, ನಗರಸಭೆ ಸದಸ್ಯರಾದ ರಾಜು ರೋಖಡೆ, ಬಿ.ಕೆ.ಸಯ್ಯದ್ ರೆಹಮಾನ್, ಕೆಜೆಪಿ ನಗರ ಘಟಕದ ಅಧ್ಯಕ್ಷ ರಮೇಶ್ ಮೆಹರ‌್ವಾಡೆ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ, ವಾಸು ಚಂದಾಪುರ್, ಗ್ರಾಮಾಂತರ ಘಟಕದ ಅಧ್ಯಕ್ಷ ಪರಮೇಶ್ವರಪ್ಪ ಹಿಂಡಸಘಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಅಂಜು ಎಸ್.ರಾಜೇನವರ, ಮಾಲತೇಶ ಭಂಡಾರೆ, ಸಿ.ಪ್ರಕಾಶ್, ಮಾರುತಿ ಶ್ರೇಷ್ಠಿ, ಕೀರ್ತಿಕುಮಾರ್, ಸೋಮಶೇಖರ್ ಸ್ವಾಮಿ, ಸ್ವಾತಿ ಹನುಮಂತ, ಗೋವಿನಾಳು ರಾಜು, ಅಜಿತ್ ಸಾವಂತ್ ಹಾಗೂ ಜಿಗಳಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.