ADVERTISEMENT

ಪತ್ರಕರ್ತನ ಹತ್ಯೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 7:45 IST
Last Updated 23 ಫೆಬ್ರುವರಿ 2012, 7:45 IST

ದಾವಣಗೆರೆ: ಮಧ್ಯಪ್ರದೇಶದ ಉಮಾರಿಯ ಜಿಲ್ಲೆಯಲ್ಲಿ ಹಿರಿಯ ಪತ್ರಕರ್ತ ಚಂದ್ರಿಕಾ ರೈ, ಅವರ ಪತ್ನಿ ದುರ್ಗಾ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯನ್ನು ಜಿಲ್ಲಾ ವರದಿಗಾರರ ಕೂಟ ಖಂಡಿಸಿದೆ.

ಉಮಾರಿಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ರೈ ಸರಣಿ ವರದಿ ಪ್ರಕಟಿಸಿದ್ದರು. ಅದನ್ನು ಸಹಿಸದೇ ಇಂತಹ ನೀಚ ಕೃತ್ಯ ಎಸಗಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಎಸಗಿದ ಅವಮಾನ ಎಂದು ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಪತ್ರಕರ್ತರನ್ನು ಹತ್ಯೆ ಮಾಡುವ ಪ್ರಕರಣ ಹೆಚ್ಚುತ್ತಿದೆ. ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ರೇ ಹಾಗೂ ಅವರ ಕುಟುಂಬದ ಸದಸ್ಯರ ಹತ್ಯೆ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ  ಎಸ್.ಎಸ್. ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಕೂಟದ ಅಧ್ಯಕ್ಷ ಚಂದ್ರಹಾಸ ಹಿರೇಮಳಲಿ, ಉಪಾಧ್ಯಕ್ಷ ಶರಣಪ್ಪ ರೆಡ್ಡೇರ, ನರಸಿಂಹ ಕುಮಾರ್, ಮಂಜುನಾಥ್ ಗೌರಕ್ಕಳವರ್, ಕಾರ್ಯದರ್ಶಿ ಬಸವರಾಜ ದೊಡ್ಮನಿ, ಖಜಾಂಚಿ ಮಲ್ಲಿಕಾರ್ಜುನ್ ಕಬ್ಬೂರ್, ಶಿವಕುಮಾರ್, ರಾಕೇಶ್ ಪೂಂಜಾ, ಶಶಿಕುಮಾರ್, ಎಂ.ವೈ. ಸತೀಶ್, ಅತ್ತಿಗೆರೆ ಮಂಜುನಾಥ್ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.