ADVERTISEMENT

ಬಿರುಸಿನ ಮಳೆಗೆ ನೆಲಕಚ್ಚಿದ ರಾಗಿ ಬೆಳೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 6:36 IST
Last Updated 13 ಅಕ್ಟೋಬರ್ 2017, 6:36 IST
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಹೊಲವೊಂದರಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಗೆ ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಹೊಲವೊಂದರಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಗೆ ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು   

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಬಿರುಸಿನ ಮಳೆ ಬಿದ್ದಿದೆ. ಮಳೆಗೆ ಹಲವು ಗ್ರಾಮಗಳಲ್ಲಿ ರಾಗಿ ಬೆಳೆ ನೆಲಕಚ್ಚಿದ್ದು, 21 ಮನೆಗಳಿಗೆ ಹಾನಿಯಾಗಿದೆ. ಸೂಳೆಕೆರೆಯ ಪ್ರಮುಖ ನೀರಿನ ಸೆಲೆಯಾಗಿರುವ ಕಾಕನೂರು ಬಳಿ ಇರುವ ಹಿರೇಹಳ್ಳ ಒಂದು ವಾರದಲ್ಲಿ ಐದನೇ ಬಾರಿ ತುಂಬಿ ಹರಿಯುತ್ತಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.

ಬಿರುಸಿನ ಮಳೆಗೆ ತಾಲ್ಲೂಕಿನ ಗರಗ, ಗುಳ್ಳೇಹಳ್ಳಿ, ಚನ್ನಗಿರಿ, ದೇವರಹಳ್ಳಿ, ನುಗ್ಗಿಹಳ್ಳಿ, ವಿ.ರಾಮೇನಹಳ್ಳಿ, ಹಿರೇಉಡ ತಾಂಡಾದಲ್ಲಿ ತೆನೆ ಬಿಟ್ಟು ಕಂಗೊಳಿಸುತ್ತಿದ್ದ ರಾಗಿ ಬೆಳೆ ನೆಲಕ್ಕೆ ಬಿದ್ದಿದೆ. ಅಡಿಕೆ ತೋಟಗಳು ಸಮೃದ್ಧವಾಗಿ ಹಸಿಯಾಗಿದ್ದು, ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅದೇ ರೀತಿ ಮಳೆ ಬಿದ್ದ ಗ್ರಾಮಗಳ ಕೆರೆಕಟ್ಟೆ ಹಾಗೂ ಚೆಕ್‌ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದೆ.

ತಾಲ್ಲೂಕಿನ ಮೇದುಗೊಂಡನಹಳ್ಳಿ, ಹೆಬ್ಬಳಗೆರೆ, ಹೊನ್ನನಾಯಕನಹಳ್ಳಿ, ಕಗತೂರು, ಹಿರೇಉಡ ತಾಂಡಾ, ಹಿರೇಕೋಗಲೂರು, ಈರಗನಹಳ್ಳಿ, ತಣಿಗೆರೆ, ಮರಡಿ, ದೇವರಹಳ್ಳಿ, ತ್ಯಾವಣಿಗೆ, ಸೋಮಲಾಪುರ, ಕಾರಿಗನೂರು, ಬೆಂಕಿಕೆರೆ, ದಿಗ್ಗೇನಹಳ್ಳಿ ಗ್ರಾಮಗಳಲ್ಲಿ ತಲಾ ಒಂದು ಮನೆ, ಅಗರಬನ್ನಿಹಟ್ಟಿ, ಕರೇಕಟ್ಟೆ ಹಾಗೂ ಗರಗ ಗ್ರಾಮಗಳಲ್ಲಿ ತಲಾ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಂದಾಜು ₹ 2.10 ಲಕ್ಷ ನಷ್ಟ ಉಂಟಾಗಿದೆ ಎಂದು ತಹಶೀಲ್ದಾರ್ ಎಸ್.ಪದ್ಮಕುಮಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.