ADVERTISEMENT

ಭದ್ರತೆಯೊಂದಿಗೆ ತುಂಗಭದ್ರೆಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:25 IST
Last Updated 18 ಫೆಬ್ರುವರಿ 2011, 7:25 IST

ದಾವಣಗೆರೆ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರು ಭಾರೀ ಭದ್ರತೆಯೊಂದಿಗೆ ಹರಿಹರ ತಾಲ್ಲೂಕು ಚಿಕ್ಕಬಿದರಿ ಸಮೀಪ ತುಂಗಭದ್ರಾ ನದಿಗೆ ಗುರುವಾರ ಪೂಜೆ ಸಲ್ಲಿಸಿದರು.ರೈ ಆಪ್ತರಾದ ಪ್ರಕಾಶ್ ಎಂಬುವರಿಗೆ ಮರಳುಗಾರಿಕೆಗೆ ಈ ಪ್ರದೇಶದಲ್ಲಿ ಪರವಾನಗಿ ದೊರೆತಿದ್ದು, ಆ ಕಾರ್ಯಕ್ಕೆ ಚಾಲನೆ ನೀಡಿ, ನದಿ ಪೂಜೆ ಸಲ್ಲಿಸಿದರು.ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ರೈ, ಇಲ್ಲಿಗೆ ಸಮೀಪದ ಐರಣಿ ಮಠಕ್ಕೆ ಭೇಟಿ ನೀಡಲಿದ್ದು, ಆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಲಾಗಿದೆ.

ತುಂಗಭದ್ರೆ ಇಲ್ಲಿನ ಜೀವನದಿ. ಇದು ತುಂಬಿ ಹರಿದು ಮಧ್ಯ ಹಾಗೂ ಉತ್ತರ ಕರ್ನಾಟಕದ ಜನತೆಗೆ ಒಳಿತುಂಟು ಮಾಡಲಿ ಎಂಬ ಉದ್ದೇಶದಿಂದ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಜಯ ಕರ್ನಾಟಕ ನಾಡಿನ ಜನರಿಗೆ ಮೂಲ ಸೌಲಭ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಹೋರಾಟ ನಡೆಸುತ್ತಿದೆ. ಸಂಘಟನೆಗೆ  ಮೂರು ವರ್ಷ ತುಂಬಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಕೋರಿಕೆ ಮೇರೆಗೆ ಇಲ್ಲಿಗೆ ಆಗಮಿಸಿದ್ದೇನೆ. ಸಮಾಜ ಸೇವೆ ತಮ್ಮ ಸಂಘಟನೆಯ ಗುರಿ. ಈ ನಿಟ್ಟಿನಲ್ಲಿ ತಾವು ತೊಡಗಿಸಿಕೊಂಡಿರುವುದಾಗಿ ಹೇಳಿದರು.

ಜನ ಸೇವಕನಿಗೆ ಇಷ್ಟೊಂದು ಭದ್ರತೆ ಆವಶ್ಯವೇ ಎಂದು ಕೇಳಿದಾಗ, ಕೆಲವು ಹೊರದೇಶಗಳಲ್ಲಿರುವ ವ್ಯಕ್ತಿಗಳಿಂದ ತಮಗೆ ಆತಂಕವಿದ್ದು ಅದಕ್ಕಾಗಿ ಭದ್ರತೆಹೊಂದಿದ್ದೇನೆ. ಇದು ಅನಿವಾರ್ಯ ಎಂದು ಸಮಜಾಯಿಷಿ ನೀಡಿದರು.ಮರಳು ಉದ್ಯಮದ ಬಗ್ಗೆ ತೊಡಗಿದ್ದೀರಾ ಎಂಬ ಪ್ರಶ್ನೆಗೆ, ತಾವು ಭಾಗಿಯಾಗಿಲ್ಲ. ಸರ್ಕಾರದ ಹರಾಜಿನಲ್ಲಿ ಯಾರು ಬೇಕಾದರೂ ಪಡೆಯಬಹುದು. ತುಂಗಭದ್ರಾ ನದಿಯ ಶುದ್ಧ ಮರಳು ಕಟ್ಟಡ ನಿರ್ಮಾಣಕ್ಕೆ ಪೂರೈಸಲಾಗುತ್ತಿದೆ. ಇತ್ತೀಚೆಗೆ ಕಲಬೆರಕೆ ಮರಳಿನಿಂದ ಕಟ್ಟಡ ಕುಸಿತದಂತಹ ಪ್ರಕರಣಗಳನ್ನು ತಪ್ಪಿಸಬೇಕು ಎಂದರು.

ಇಲ್ಲಿನ ನದಿ ಪಾತ್ರದ 130 ಎಕರೆ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದೆ. ರೂ6 ಲಕ್ಷಕ್ಕೆ ಪರವಾನಗಿ ಪಡೆಯಲಾಗಿದೆ ಎಂದು ಮರಳು ಉದ್ಯಮಿ ಪ್ರಕಾಶ್ ತಿಳಿಸಿದರು.ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆಲೂರು ರಾಜಶೇಖರ್, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.