ADVERTISEMENT

ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:40 IST
Last Updated 18 ಜೂನ್ 2011, 6:40 IST

ದಾವಣಗೆರೆ: ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿಗೆ ಒತ್ತಾಯಿಸಿ ಪಾಲಿಕೆ ಪೌರ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮೇಯರ್ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲಾಯಿತು.

ಪಾಲಿಕೆಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿರುವ 250 ಪೌರ ಕಾರ್ಮಿಕರಿಗೆ ಕಳೆದ ಎರಡು ತಿಂಗಳಿಂದ ಸೂಕ್ತ ವೇತನ ಪಾವತಿಸಿಲ್ಲ. ಮೇಯರ್ ಅವರು ಚೆಕ್ ತಡೆಹಿಡಿದಿದ್ದಾರೆ. ಇದರಿಂದಾಗಿ ಪೌರ ಕಾರ್ಮಿಕರ ನಿತ್ಯ ಜೀವನಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಪಾಲಿಕೆ ಆಯುಕ್ತರು ಚೆಕ್ ಬಿಡುಗಡೆ ಮಾಡಿದ್ದರೂ ಮೇಯರ್ ತಡೆಹಿಡಿದು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ವೇತನ ಪಾವತಿಗೆ ಕಾನೂನು ತೊಡಕು ಇದೆ ಎಂದು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ಕಚೇರಿ ಮುಂಭಾಗ ಸೇರಿದ ಪೌರ ಕಾರ್ಮಿಕರು ಧಿಕ್ಕಾರ ಕೂಗಿದರು. ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಎಲ್.ಎಚ್. ಸಾಗರ್, ಕುಕ್ಕುವಾಡ ಮಲ್ಲೇಶ್, ಸುಮಂಗಲಮ್ಮ, ರೇಣುಕಮ್ಮ ಇತರರು ಇದ್ದರು.
ಮೇಯರ್ ಸ್ಪಷ್ಟನೆ

ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಗುತ್ತಿಗೆದಾರರೇ ವೇತನ ಪಾವತಿಸಬೇಕು. ಆದರೆ, ಕೆಲವು ದಿನಗಳ ಹಿಂದೆ ದಾವಣಗೆರೆ ಜಿಲ್ಲಾ ಪೌರ ಮತ್ತು ಕೊಳಚೆ ನಿರ್ಮೂಲನ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಸಂಘದವರು ಬಂದು, ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಭವಿಷ್ಯನಿಧಿ ಪಾವತಿಸಿಲ್ಲ. ಆ ಹಣವನ್ನು ಮುರಿದು ಭವಿಷ್ಯ ನಿಧಿಗೆ ಕಟ್ಟದೇ ವಂಚಿಸಲಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಚೆಕ್ ತಡೆಹಿಡಿಯಲಾಗಿದೆ.

ಗುತ್ತಿಗೆದಾರರ ಅವಧಿ ಮುಗಿಯುತ್ತಾ ಬಂದಿದ್ದು, ಹಣ ಪಾವತಿಸಿಬಿಟ್ಟರೆ ಕಾರ್ಮಿಕರ ಭವಿಷ್ಯನಿಧಿಯನ್ನು ಪಾವತಿಸದೆ ಇರುವ ಸಾಧ್ಯತೆಯಿದೆ. ಗುತ್ತಿಗೆದಾರರನ್ನು ವಿಚಾರಿಸುವ ಉದ್ದೇಶದಿಂದ ಚೆಕ್ ಪಾವತಿಸಿಲ್ಲ. ನಾಳೆ (ಜೂನ್ 18) ಪಾಲಿಕೆ ಆಯುಕ್ತರು ಬಂದ ಬಳಿಕ ಕೂಡಲೇ ಚರ್ಚಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮೇಯರ್ ಎಂ.ಎಸ್. ವಿಠ್ಠಲ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.