ADVERTISEMENT

ಸಂಭ್ರಮದ ರಥೋತ್ಸವ, ಮುಳ್ಳೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:40 IST
Last Updated 19 ಮಾರ್ಚ್ 2012, 6:40 IST

ಮಲೇಬೆನ್ನೂರು: ಮೀಪದ ಯಲವಟ್ಟಿಯ ಮುಜರಾಯಿ ಇಲಾಖೆಗೆ ಸೇರಿದ ಹನುಮಂತ ದೇವರ ರಥೋತ್ಸವ ಹಾಗೂ ಮುಳ್ಳು ಗದ್ದಿಗೆ ಉತ್ಸವ ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಾಂಪ್ರದಾಯಿಕ ಕಳಸ ಪೂಜೆ, ಬಲಿದಾನ, ರಥಶಾಂತಿ ನಂತರ ಉತ್ಸವಮೂರ್ತಿ ರಥಾರೋಹಣ ಜರುಗಿತು. ತೆಂಗಿನಕಾಯಿಗಳನ್ನು ರಥದ ಗಾಲಿಗೆ ಜನತೆ ಒಡೆದು ಭಕ್ತಿ ಸಮರ್ಪಿಸಿದರು. ಸೇರಿದ್ದ ಜನತೆ ಬಾಳೆಹಣ್ಣು, ಉತ್ತುತ್ತಿ, ಧಾನ್ಯ ಅರ್ಪಿಸಿ ಭಕ್ತಿ ಮೆರೆದರು. ತಮಟೆ, ಮಂಗಳವಾದ್ಯ, ಡೊಳ್ಳು, ಜಾಂಚ್ ಹಾಗೂ ನಾಸಿಕ್  ಡೋಲಿನ ತಂಡ, ದಾಸ ಸಮೂಹದ ಹರಿಸೇವೆ ಕಳೆ ತಂದಿದ್ದವು. ಜಿಗಳಿ ರಂಗನಾಥ ಸ್ವಾಮಿ ಉತ್ಸವ ಮೂರ್ತಿ ಕರೆತರಲಾಗಿತ್ತು. ಹಾರದ ಹರಾಜು ಹಮ್ಮಿಕೊಳ್ಳಲಾಗಿತ್ತು.

ಹರಹರ ಮಹಾದೇವ, ರಾಮ ರಾಮ ಗೋವಿಂದ ಎನ್ನುತ್ತಾ ದಿಡ್ಡಿ ಬಾಗಿಲ ತನಕ ಜನತೆ ತೇರನ್ನು ಎಳೆದು ತಂದರು. ತೇರನ್ನು ಸುಂದರವಾಗಿ ಹೂ, ಧ್ವಜ ಪತಾಕೆಗಳಿಂದಲೂ, ದೇವಾಲಯವನ್ನು ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು.

ADVERTISEMENT

ಮುಳ್ಳೋತ್ಸವ: ಗೋಧೂಳಿ ಲಗ್ಮದಲ್ಲಿ ದೇವಾಲಯದ ಮುಂಭಾಗದಲ್ಲಿ ಹಾಕಿದ್ದ  ಕಾರೆ ಮುಳ್ಳಿನ ರಾಶಿಯನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.  ಭೂತದ ಹಲಗೆ  ಹಿಡಿದ ವ್ಯಕ್ತಿ ಮೊದಲು ಸಾಗಿ ಬಂದ. ನಂತರ ಜನತೆ ದೇವತೆ ನಾಮ ಸ್ಮರಣೆ ಮಾಡುತ್ತ ಹರಕೆ ಸಲ್ಲಿಸಿದರು.

ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮಾಡಳಿತ ಕುಡಿಯುವ ನೀರು ಹಾಗೂ ಸ್ವಚ್ಛತೆ ಕೆಲಸ ಜನಮನ ಸೆಳೆದವು. ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆ ಜನತೆ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.