ADVERTISEMENT

ಸಾಮಾಜಿಕ ಸೇವೆಯಿಂದ ಜೀವನ ಸಾರ್ಥಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 6:50 IST
Last Updated 6 ಜುಲೈ 2012, 6:50 IST

ದಾವಣಗೆರೆ: ಹುಟ್ಟಿದ ಮನುಷ್ಯನಿಗೆ ಹೆಸರು ಇರುವುದಿಲ್ಲ. ನಿಷ್ಕಳಂಕ ಮನುಷ್ಯನಿಗೆ ನಿರ್ದಿಷ್ಟ ಹೆಸರಿಟ್ಟು ನಾಗರಿಕತೆ ರೂಢಿಸಬೇಕಾಗುತ್ತದೆ. ನಾಗರಿಕತೆ ಪಡೆದ ಮನುಷ್ಯ ಸತ್ತ ನಂತರವೂ ಹೆಸರು ಉಳಿಯುವಂತಹ ಪುಣ್ಯ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿನ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ 61ನೇ ಹುಟ್ಟುಹಬ್ಬ ಆಚರಣೆ ಸಮಾರಂಭದ ನೇತೃತ್ವದ ವಹಿಸಿ ಅವರು ಮಾತನಾಡಿದರು.

ಜನನ-ಮರಣ-ಜೀವನ ಎಂಬ ಮೂರಕ್ಷರಗಳಲ್ಲಿ ಎಡರು- ತೊಡರುಗಳು ಅಧಿಕವಾಗಿರುತ್ತದೆ. ಎಲ್ಲವನ್ನು ಮೆಟ್ಟಿನಿಲ್ಲಲು ಮಹಾತ್ಮರಾದ ಬಸವಣ್ಣ, ಅಲ್ಲಮಪ್ರಭು, ಮಹಾತ್ಮ ಗಾಂಧಿಯಂತಹ ಮಹಾನ್ ವ್ಯಕ್ತಿಗಳ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ಥಿತಿವಂತರು ಇಂದು ವಿಲಾಸ ಜೀವನದಲ್ಲಿ ಮೈಮರೆಯದೇ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿ ಕೊಳ್ಳುವುದರಿಂದ ದೇವರ ಅನುಗ್ರಹ ಪಡೆಯಬಹುದು ಎಂದರು.

ADVERTISEMENT

ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಂಸತ್ ಸದಸ್ಯ ಸಿದ್ದೇಶ್ವರ ಅವರು ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮಪಟ್ಟು ದುಡಿದಿದ್ದಾರೆ. ಇನ್ನೂ ಸಮಾಜಸೇವೆ ಮಾಡುವಂಥ ಶಕ್ತಿ ಮತ್ತು ಆರೋಗ್ಯವನ್ನು ದೇವರು ಕರುಣಿಸಲಿ ಎಂದರು.

ಇದೇ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಸಿದ್ದೇಶ್ವರ ಅವರ 50ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜ ನಾಯ್ಕ, ಗಾಯತ್ರಿ ಸಿದ್ದೇಶ್ವರ, ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್‌ಗಳಾದ ಎಂ.ಎಸ್. ವಿಠ್ಠಲ್, ಎಚ್.ಎನ್. ಗುರುನಾಥ್, ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಪ್ಪ, ಕರಿಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.